ಸತತ ಮಳೆಗೆ ಮುಳುಗಡೆಯಾದ ದಂಡೋತಿ ಕಾಗಿಣಾ ನದಿ ಸೇತುವೆ, ಸಂಪರ್ಕ ಕಡಿತ | ಪ್ರಯಾಣಿಕರು ಪರದಾಟ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಪ್ರವಾಹದಿಂದಾಗಿ ನಾಗಾವಿ ನಾಡಿನ ಜನರ ಜೀವನದಿ ಕಾಗಿಣಾ ನದಿ ಸೇತುವೆ ಮುಳುಗಡೆಯಾಗಿದ್ದು, ಸಣ್ಣಪುಟ್ಟ ಹಳ್ಳಕೊಳ್ಳ, ಚರಂಡಿಗಳು, ತಗ್ಗು ಪ್ರದೇಶದ ಸ್ಥಳಗಳು ತುಂಬಿ ತುಳುಕುತ್ತಿವೆ ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ನೀರಿನಿಂದ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಸಂಚಕಾರ ಉಂಟು ಮಾಡಿದೆ.
ತಾಲೂಕಿನ ದಂಡೋತಿ ಸಮೀಪ ಹರಿಯುವ ಕಾಗಿಣಾ ನದಿ ಸೇತುವೆ ಪ್ರವಾಹದಿಂದ ಸಂಪೂರ್ಣ ಮುಳುಗಡೆಯಾಗಿದೆ ಹೀಗಾಗಿ ಗುರುವಾರ ಪೂರ್ತಿ ದಿನ ಈ ಮಾರ್ಗದ ಚಿತ್ತಾಪುರ -ಕಲಬುರಗಿ-ಕಾಳಗಿ-ಸೇಡಂ ಸೇರಿದಂತೆ ಇತರೆ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಪ್ರಯಾಣಿಕರು, ಮಹಿಳೆಯರು, ವಿದ್ಯಾರ್ಥಿಗಳು, ನೌಕರರು, ವ್ಯಾಪಾರಿಗಳು ಪರದಾಡುವಂತಾಯಿತು. ಶಹಾಬಾದ ಮೂಲಕ ಕಲಬುರಗಿ ಹಾಗೂ ಮಳಖೇಡ ಮೂಲಕ ಕಾಳಗಿ ಹಾಗೂ ಸೇಡಂ ತಾಲೂಕುಗಳಿಗೆ ಪ್ರಯಾಣಿಕರು ಸಂಚಾರ ಮಾಡಿದರು.
ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಮರಗೋಳ ಕ್ರಾಸ್ ಹತ್ತಿರ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧ ಮಾಡಿ ರಕ್ಷಣೆ ನೀಡಿದರು. ತಹಸೀಲ್ದಾರ್ ನಾಗಯ್ಯ ಹಿರೇಮಠ, ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ ಭೇಟಿ ನೀಡಿದ್ದರು. ಎಎಸ್ಐ ಬಾಬುರಾವ್ ಸೇರಿದಂತೆ ಕಂದಾಯ ಹಾಗೂ ಪೊಲೀಸ್ ಸಿಬ್ಬಂದಿಗಳು ಕರ್ತವ್ಯದಲ್ಲಿದ್ದರು.

