ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶ್ರೀ ಸಿಮೆಂಟ್ ಕಂಪೆನಿ ಎದುರು ಕಾರ್ಮಿಕರಿಂದ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಸೇಡಂ: ತಾಲೂಕಿನ ಕೊಡ್ಲಾ ಗ್ರಾಮದ ಹತ್ತಿರದ ಶ್ರೀ ಸಿಮೆಂಟ್ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕರಿಗೆ ಮಾಸಿಕ ವೇತನ ಅಥವಾ ದಿನಗೂಲಿ ಸಂಬಳ ನೀಡುವುದು, ಉದ್ಯೋಗಿಯ ನಿವೃತ್ತಿ ಉಳಿತಾಯಕ್ಕೆ ಭವಿಷ್ಯ ನಿಧಿ ನೀಡುವುದು, ರಜೆಗಳು ವಾರ್ಷಿಕ ರಜೆ, ಅನಾರೋಗ್ಯ ರಜೆ, ಹಬ್ಬದ ರಜೆ ನೀಡಬೇಕೆಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕರು ಶ್ರೀ ಸಿಮೆಂಟ್ ಕಂಪೆನಿ ಗೇಟ್ ಎದುರು ಪ್ರತಿಭಟನೆ ನಡೆಸಿದರು.
ಕಾರ್ಮಿಕ ಮುಖಂಡ ಅಯ್ಯಪ್ಪ ಬಾಗೋಡಿ ಡೋಣಗಾಂವ ಮಾತನಾಡಿ, 2018 ರಿಂದ ಸೇವೆ ಸಲ್ಲಿಸುತ್ತಿದ್ದ ನಮಗೆ ಕನಿಷ್ಠ ಸಾಮಾನ್ಯ ಸೌಲಭ್ಯಗಳನ್ನು ಒದಗಿಸಿಲ್ಲ, ಈ ಕುರಿತು ನಾಲ್ಕು ತಿಂಗಳ ಹಿಂದೆ ಕಂಪೆನಿ ಆಡಳಿತ ಮಂಡಳಿಗೆ ಮನವಿ ಮಾಡಿದ್ದರೂ ಸಹ ಇಲ್ಲಿವರೆಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಓವರ್ಟೈಮ್ ಭತ್ಯೆ, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು, ಗ್ರ್ಯಾಚ್ಯುಟಿ ದೀರ್ಘಾವಧಿ ಸೇವೆ ಮಾಡಿದವರಿಗೆ ನೀಡುವುದು, ಪ್ರಮೋಶನ್ ಮತ್ತು ಇನ್ಕ್ರಿಮೆಂಟ್ ಕಾರ್ಯಕ್ಷಮತೆ ಆಧಾರಿತ, ಕ್ಯಾಂಟೀನ್ / ಊಟ ಸೌಲಭ್ಯ ಸರಿಯಾಗಿ ಸಿಗುವಂತೆ ಮಾಡಬೇಕು, ಸಾರಿಗೆ ಸೌಲಭ್ಯ ಬಸ್ ಅಥವಾ ಟ್ರಾನ್ಸ್ಪೋರ್ಟ್ ಭತ್ಯೆ ನೀಡಬೇಕು ಹಾಗೂ ಸುರಕ್ಷತಾ ಸೌಲಭ್ಯಗಳು ಹೆಲ್ಮೆಟ್, ಗ್ಲೌಸ್, ಸುರಕ್ಷಿತ ಯಂತ್ರೋಪಕರಣಗಳು ನೀಡಬೇಕೆಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಡಿ.16 ರಂದು ನಡೆದ ಪ್ರತಿಭಟನೆ ಸ್ಥಳಕ್ಕಾಗಮಿಸಿದ ಕಂಪೆನಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಎರಡು ದಿನ ಸಮಯಾವಕಾಶ ನೀಡಿ ಸಮಸ್ಯೆಗಳು ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ಡಿ.18 ಗುರುವಾರ ದಂದು ಪ್ರಮುಖರ ಸಭೆ ಕರೆದಿದ್ದಾರೆ ಆದರೆ ಯಾವುದೇ ಬೇಡಿಕೆಗಳು ಈಡೇರಿಸಿಲ್ಲ ಹೀಗಾಗಿ ಕಂಪೆನಿಯವರು ಕಾರ್ಮಿಕರ ಜೀವನದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕರಾದ ರಾಹುಲ್ ಸೇಡಂ, ಸಚಿನ್ ಸೇಡಂ, ಕುಪೇಂದ್ರ ಕೊಡ್ಲಾ, ಮೋನಯ್ಯಾ ಗುತ್ತೇದಾರ ಕೊಡ್ಲಾ, ನಾಗರಾಜ್ ಸೇಡಂ, ರಮೇಶ್ ಸಣ್ಣೂರ್, ನಾಗರಾಜ್ ರಾಯಲ್ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದ್ದರು.

