ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ಡಾ.ಸಿ.ಸೋಮಶೇಖರ ಪರ ನಭಿಸಾಬ್ ಕುಷ್ಟಗಿ ಭರ್ಜರಿ ಪ್ರಚಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಮುಂಬರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಸೇವಾಕಾಂಕ್ಷಿ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ ಅವರ ಪರವಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ ಎಂದು ಕಸಾಪ ಕೇಂದ್ರ ಸಮಿತಿ ನಿಕಟಪೂರ್ವ ಸಂಘ ಸಂಸ್ಥೆ ಪ್ರತಿನಿಧಿ ನಭಿಸಾಭ್ ಕುಷ್ಟಗಿ ಹೇಳಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ, ಸೇಡಂ, ಕಾಳಗಿ ತಾಲೂಕಿನ ಕಸಾಪ ಪದಾಧಿಕಾರಿಗಳಿಗೆ ಸೋಮವಾರ ಭೇಟಿ ಮಾಡಿ, ನಂತರ ಚಿತ್ತಾಪುರ ಪಟ್ಟಣದಲ್ಲಿ ಮಂಗಳವಾರ ಕಸಾಪ ಪದಾಧಿಕಾರಿಗಳಿಗೆ ಮತ್ತು ಸಾಹಿತಿಗಳಿಗೆ ಭೇಟಿ ಮಾಡಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನ ಸೇವಾಕಾಂಕ್ಷಿ ಡಾ.ಸಿ.ಸೋಮಶೇಖರ ಅವರ ವೈಯಕ್ತಿಕ ಪರಿಚಯದ ಕರಪತ್ರ ವಿತರಣೆ ಮಾಡಿ ಭರ್ಜರಿ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕಳೆದ ಆಗಸ್ಟ್ ತಿಂಗಳಲ್ಲಿ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯಿಂದ ಪ್ರಾರಂಭವಾದ ಪ್ರವಾಸ ಇಲ್ಲಿವರೆಗೆ 21 ಜಿಲ್ಲೆಗಳಲ್ಲಿ 41 ಸಾವಿರ ಕಿ.ಮೀ ಸಂಚರಿಸಿ, ಕಸಾಪ ಪದಾಧಿಕಾರಿಗಳು, ಅಜೀವ ಸದಸ್ಯರು, ಸಾಹಿತಿಗಳು ಸೇರಿದಂತೆ 7 ಸಾವಿರ ಜನರನ್ನು ಭೇಟಿ ಮಾಡಿದ್ದು ಸಂಪರ್ಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಎಲ್ಲಾ ಕಡೆ ಎಲ್ಲಾ ಸಾಹಿತಿಗಳಿಂದ ಮತ್ತು ಕಸಾಪ ಅಜೀವ ಸದಸ್ಯರಿಂದ ಉತ್ತಮ ಅಭಿಪ್ರಾಯ ಹಾಗೂ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ ಹೀಗಾಗಿ ಈ ಭಾಗದ ಎಲ್ಲರೂ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ವಿರೇಂದ್ರ ಕೊಲ್ಲೂರು, ಪದಾಧಿಕಾರಿಗಳಾದ ರವಿಶಂಕರ್ ಬುರ್ಲಿ, ದೇವಪ್ಪ ನಂದೂರಕರ್, ಶಾಂತಕುಮಾರ್ ಮಳಖೇಡ, ಮಹ್ಮದ್ ಇಬ್ರಾಹಿಂ, ನರಸಪ್ಪ ಚಿನ್ನಾಕಟ್ಟಿ, ಮಹ್ಮದ್ ಮಶಾಕ್, ನರಸಿಂಹ ಭೋವಿ, ಅಬ್ದುಲ್ ಕಲಾಂ ಸೇರಿದಂತೆ ಇತರರು ಇದ್ದರು. ಕಸಾಪ ಮಾಜಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ ನಿರೂಪಿಸಿದರು, ವೀರಸಂಗಪ್ಪ ಸುಲೇಗಾಂವ ವಂದಿಸಿದರು.
ನಂತರ ಹಿರಿಯ ನ್ಯಾಯವಾದಿ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ಅವಂಟಿ ಅವರನ್ನು ಭೇಟಿ ಮಾಡಿ ಡಾ.ಸಿ.ಸೋಮಶೇಖರ ಅವರಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

