ವಾಡಿ ಮಾರುಕಟ್ಟೆಯ ಸ್ಥಳ ಬದಲಾವಣೆ ಮಾಡುವ ನಿರ್ಧಾರ ಪುರಸಭೆ ಕೈ ಬಿಡಲು ಎಸ್’ಯುಸಿಐ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತಾಪುರ: ತಾಲೂಕಿನ ವಾಡಿ ಪಟ್ಟಣವು ಇಲ್ಲಿನ ಸುತ್ತಮುತ್ತಲಿನ ಹಳ್ಳಿಗಳು ಹಾಗೂ ತಾಂಡಾಗಳಿಗೆ ಇದು ಮಾರುಕಟ್ಟೆಯ ಕೇಂದ್ರ ಬಿಂದುವಾಗಿದೆ. ವಾಡಿ ಪಟ್ಟಣದಲ್ಲಿ ಪ್ರತಿ ಗುರುವಾರವು ನಡೆಯುವ ಸಂತೆಯಲ್ಲಿ ಸಾವಿರಾರು ಜನ ವ್ಯಾಪಾರಕ್ಕಾಗಿ ಆಗಮಿಸುವ ಪ್ರಮುಖ ಸ್ಥಳವಾಗಿದೆ. ಆದರೆ ಈ ಮಾರುಕಟ್ಟೆಗೆ ಇಲ್ಲಿಯವರೆಗೂ ಸರಿಯಾದ ಸ್ಥಳಾವಕಾಶ ನೀಡುವಲ್ಲಿ ಸ್ಥಳಿಯ ಪುರಸಭೆಯು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈಗ ಇದ್ದಕ್ಕಿದ್ದಂತೆ ವ್ಯಾಪಾರದ ಸ್ಥಳ ಬದಲಾವಣೆ ಮಾಡುವ ಕಾರ್ಯಕ್ಕೆ ಪುರಸಭೆ ಮುಂದಾಗಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಎಸ್’ಯುಸಿಐ ಸ್ಥಳೀಯ ಕಾರ್ಯದರ್ಶಿ ಶರಣು ಹೇರೂರ್ ಹೇಳಿದರು.
ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷವು ವಾಡಿ ಸ್ಥಳೀಯ ಸಮಿತಿಯ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದ ಅವರು, ಈ ರೀತಿಯ ನಿರ್ಧಾರಗಳಿಂದಾಗಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರನ್ನು ಸಂಕಷ್ಟಕ್ಕೆ ದೂಡಿದಂತಾಗುತ್ತದೆ. ಸುಮಾರು ವರ್ಷಗಳಿಂದ ಪಟ್ಟಣದ ಮರಾಠ ಗಲ್ಲಿ, ಗಾಂಧಿ ಚೌಕ್, ಅಂಬೇಡ್ಕರ್ ಚೌಕ್, ಫೋಟೋ ಸ್ಟುಡಿಯೋ ಮಾರ್ಗದಲ್ಲಿ ನಡೆಯುತ್ತಿರುವ ಈ ಮಾರುಕಟ್ಟೆಯನ್ನು ಏಕಾಏಕಿ ಸ್ಥಳ ಬದಲಾವಣೆ ಮಾಡುವ ನಿರ್ಧಾರವನ್ನು ಪುರಸಭೆಯು ಈ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ಸೂಕ್ತವಾದ ಖಾಯಂ ಸ್ಥಳವನ್ನು ಮಾರುಕಟ್ಟೆಗಾಗಿ ನಿಗದಿ ಮಾಡಬೇಕು. ಈ ಮೂಲಕ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಬೇಕು, ಗುರುವಾರದ ವಾಡಿ ಸಂತೆಗೆ ಖಾಯಂ ಸ್ಥಳವಕಾಶ ನೀಡಬೇಕು, ವ್ಯಾಪಾರಸ್ಥರಿಗೆ ಕುಡಿಯುವ ನೀರು, ಶೌಚಾಲಯ ಒದಗಿಸಬೇಕು. ಬಸ್ ನಿಲ್ದಾಣ ಹಾಗೂ ಮೌಲಾನ ಆಜಾದ್ ವೃತ್ತದ ಬಳಿ ಪ್ರತಿದಿನ ಪೊಲೀಸರನ್ನು ನೇಮಿಸಿ ಟ್ರಾಫಿಕ್ ನಿಯಂತ್ರಣ ಮಾಡಬೇಕು, 23 ವಾರ್ಡ್ ಗಳಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಿಸಬೇಕು, ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕು, ಅಧಿಕಾರಿಗಳ ನಾಮ ಫಲಕ ಅಂಟಿಸಬೇಕು, ಚಲನ ವಲನ ಪುಸ್ತಕ ಇಡಬೇಕು, ಜಾಮಿಯಾ ಮಸೀದಿ ಮುಂಭಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೋಡಬೇಕೆಂಬ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ರಾಜು ಒಡೆಯರ, ಚಂದ್ರಕಾಂತ್ ಪಗ್ಲಾಪುರ, ಸಾಯಿನಾಥ್ ಚಿಟ್ಟೆಲ್ಕರ್. ಶ್ರೀಶೈಲ್ ಕೆಂಚಗುಂಡಿ, ಶರಣಪ್ಪ ಚಿತ್ತಾಪುರಕರ್, ವಿಶ್ವ ಸಾಗರ್ ಉಪಸ್ಥಿತರಿದ್ದರು.

