ಚಿತ್ತಾಪುರದಲ್ಲಿ ಸಂಭ್ರಮದ ನಾಗರ ಪಂಚಮಿ | ನಾಗರ ಮೂರ್ತಿಗಳಿಗೆ ಹಾಲೆರೆದು ಭಕ್ತಿಭಾವ ಅರ್ಪಿಸಿದ ಮಹಿಳೆಯರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮಂಗಳವಾರ ಸಡಗರ ಸಂಭ್ರಮದಿಂದ ನಾಗರಪಂಚಮಿ ಹಬ್ಬ ಆಚರಿಸಲಾಯಿತು.
ಪಟ್ಟಣದ ರಾಯಲ್ ಮೈದಾನದಲ್ಲಿ ನಾಗರ ಮೂರ್ತಿಗಳಿಗೆ ಮಹಿಳೆಯರು ವಿವಿಧ ಬತ್ತಿಗಳಿಂದ ನಾಗರ ಮೂರ್ತಿಗೆ ಅಲಂಕಾರ ಮಾಡಿದರು. ನಂತರ ಕುಟುಂಬದ ಸದಸ್ಯರು ಹಾಲೆರೆದು ಭಕ್ತಿಭಾವ ಅರ್ಪಿಸಿದರು. ಕರ್ಪೂರ ಬೆಳಗಿ ಹೂವು ಕಾಯಿ ಅರ್ಪಿಸಿ, ಪ್ರಾರ್ಥನೆ ಸಲ್ಲಿಸಿದರು. ಅಲ್ಲದೆ ಅಳ್ಳು, ಕಡಲೆ ಗುಗ್ಗರಿ, ಶೇಂಗಾದ ಉಂಡೆ, ತಂಬಿಟ್ಟು ಕಡಲೆಕಾಳು ಪಲ್ಲೆ, ಮುಟಿಗಿ ಉಂಡಿಗಳನ್ನು ನಾಗರ ಮೂರ್ತಿಗೆ ನೈವೇದ್ಯ ಸಲ್ಲಿಸಿದರು. ಕಲ್ಲಿನ ನಾಗರಕ್ಕೆ ಹಾಲೆರೆದು, ಮಹಿಳೆಯರು, ಹೆಣ್ಣು ಮಕ್ಕಳು ಉಪವಾಸ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ತಮ್ಮ ಆಪ್ತರಿಗೆ, ಬಂಧುಗಳಿಗೆ ಕುಪ್ಪಸ, ಕೊಬ್ಬರಿ, ಅಳ್ಳಿಟ್ಟು ಮತ್ತು ಗುಗ್ಗರಿ ಕೊಟ್ಟರು. ಹಬ್ಬಕ್ಕೆ ತಯಾರಿಸಿದ ಖಾದ್ಯಗಳನ್ನು ಪರಸ್ಪರ ಹಂಚಿಕೊಂಡು ಸವಿದರು.
ಪಂಚಮಿ ಅಂಗವಾಗಿ ಯುವಕರು ಭಾರ ಎತ್ತುವುದು, ನಿಗದಿಪಡಿಸಿದ ಗುರಿಯತ್ತ ನಿಂಬೆ ಹಣ್ಣು, ತೆಂಗಿನ ಕಾಯಿ ಎಸೆಯುವುದು, ಕಣ್ಣಿಗೆ ಬಟ್ಟೆ ಕಟ್ಟಿ ಸ್ಥಳ ಗುರುತಿಸುವುದು, ಎತ್ತಿನ ಗಾಡಿಗಳನ್ನು ಜಗ್ಗುವ ಸಾಹಸದ ಬಾಜಿ ಕಟ್ಟಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪ್ರಾಂತ ಸಹ ಸೇವಾ ಪ್ರಮುಖ ಮತ್ತು ವಿಭಾಗ ಕಾರ್ಯದರ್ಶಿ ಅಂಬರೇಶ್ ಸುಲೇಗಾಂವ್, ವಿಭಾಗ ಬಜರಂಗದಳ ಸಂಯೋಜಕ ಅಜಯ್ ಬಿದರಿ, ಜಿಲ್ಲಾ ಕಾರ್ಯದರ್ಶಿ ಮಹಾದೇವ ಅಂಗಡಿ, ಜಿಲ್ಲಾ ಮಾತೃಶಕ್ತಿ ಪ್ರಮುಖ ಸುವರ್ಣ ಶಿಲ್ಪಿ, ಜಿಲ್ಲಾ ಸೇವಾ ಪ್ರಮುಖ ವೀರಣ್ಣ ಶಿಲ್ಪಿ, ತಾಲೂಕ ಅಧ್ಯಕ್ಷ ಶ್ರೀನಿವಾಸ ಹಳ್ಳಿ, ತಾಲೂಕ ಕಾರ್ಯದರ್ಶಿ ಸಾಬಣ್ಣ ಪೂಜಾರಿ, ತಾಲೂಕ ಬಜರಂಗದಳ ಸಂಯೋಜಕ ಮಲ್ಲಿಕಾರ್ಜುನ ಉಪ್ಪಾರ, ಯಲ್ಲಪ್ಪ ಪುಂಗಿ, ಸುಧೀರ ಬೆನಕನಹಳ್ಳಿ, ರಾಜು ಕಲಶೆಟ್ಟಿ, ಸಂತೋಷ್ ಹಾವೇರಿ, ಮೇಘರಾಜ್ ಗುತ್ತೇದಾರ, ಕಾಶೀನಾಥ್ ಸಂಗಾವಿ, ಮಲ್ಲಿಕಾರ್ಜುನ ಮುಗುಳನಾಗಾವಿ, ವಿಜಯಲಕ್ಷಿ ಬಿರಾದಾರ್, ಜ್ಯೋತಿ ಜಗನ್ನಾಥ್, ಶಿವಲೀಲಾ ಹಿರೇಮಠ, ಗೋದಾವರಿ ನಾಲವಾರ, ಮಂಜುನಾಥ ಶಾಸ್ತ್ರಿ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು.
“ಹೆಣ್ಣುಮಕ್ಕಳಿಗೆ ನಾಗರಪಂಚಮಿ ಅಂದರೆ ತವರುಮನೆಯ ಸಂಭ್ರಮ ಮನೆಮಾಡುತ್ತೆ. ಮಹಿಳೆಯರು ತವರುಮನೆಗೆ ಆಗಮಿಸಿ, ಹೊಸ ಉಡುಗೆ ತೊಡುಗೆಗಳನ್ನ ಧರಿಸಿ ನಾಗರಪಂಚಮಿ ಆಚರಿಸುತ್ತೇವೆ”.-ಮಂಜುಳಾ ಚಿತ್ತಾಪುರ.

