ಚಿತ್ತಾಪುರದಲ್ಲಿ ಮುಷ್ಕರ ಯಶಸ್ವಿ | ಸಾರಿಗೆ ನೌಕರರ ಮುಷ್ಕರ, ಪ್ರಯಾಣಿಕರ ಪರದಾಟ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವೇತನ ಪರಿಷ್ಕರಣೆ, ಹೆಚ್ಚುವರಿ ವೇತನ ಬಾಕಿ ಬಿಡುಗಡೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಮಂಗಳವಾರ ರಾಜ್ಯದಾದ್ಯಂತ ಕೈಗೊಂಡ ಅನಿರ್ಧಿಷ್ಟಾವಧಿ ಮುಷ್ಕರದ ಬಿಸಿ ನಾಗಾವಿ ನಾಡಿನ ಕೇಂದ್ರ ಸ್ಥಾನ ಚಿತ್ತಾಪುರ ಕ್ಕೂ ತಟ್ಟಿದೆ.
ಸಾರಿಗೆ ನೌಕರರು ಮುಷ್ಕರಕ್ಕೆ ಬೆಂಬಲಿಸಿದ್ಛರಿಂದ ಬಸ್ಸುಗಳು ನಿಲ್ದಾಣದ ತುಂಬಾ ನಿಂತಿದ್ದವು. ಒಂದೂ ಬಸ್ ಸಂಚಾರ ಮಾಡಲಿಲ್ಲ. ಕಲಬುರಗಿ ಸೇರಿದಂತೆ ಯಾವುದೇ ಹಳ್ಳಿಗಳಿಗೂ ಬಸ್ ಹೋಗದೆ ಇರುವುದರಿಂದ ಪ್ರಯಾಣಿಕರು ಮಹಿಳೆಯರು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಬೆಳಗ್ಗೆ ವಿವಿಧ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾಕಾಲೇಜುಗಳಿಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯರು, ಪ್ರಯಾಣಿಕರು, ಸಾರ್ವಜನಿಕರು, ವಿದ್ಯಾರ್ಥಿಗಳು, ನೌಕರರು, ವ್ಯಾಪಾರಿಗಳು ಸಾರಿಗೆ ಬಸ್ ಸಂಚಾರ ಸ್ಥಗಿತದಿಂದ ಪರದಾಡಿದರು.
ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರ್ ಜೋರಾಗಿತ್ತು. ಚಿತ್ತಾಪುರ-ಕಲಬುರಗಿ ಗೆ ತೆರಳಲು ಸಾರಿಗೆ ಬಸ್ ಟಿಕೆಟ್ ರೂ.78 ಇದೆ, ಮಂಗಳವಾರ ಬಸ್ ಸಂಚಾರ ಸ್ಥಗಿತ ಇದ್ದ ಕಾರಣ ಖಾಸಗಿ ಕ್ರೂಸರ್ ವಾಹನಗಳು ಒಬ್ಬರಿಗೆ ರೂ.100 ತೆಗೆದುಕೊಂಡು ಹೋಗುತ್ತಿರುವುದು ಕಂಡುಬಂತು.
ಮುನ್ನೆಚ್ಚರಿಕೆ ಕ್ರಮವಾಗಿ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

