ಪೌರ ಕಾರ್ಮಿಕರ ದಿನಾಚರಣೆ | ನಗರ ಸ್ವಚ್ಛತೆಗಾಗಿ ಶ್ರಮಿಸುವ ಪೌರ ಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ: ಹಳ್ಳಿ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಪೌರ ಕಾರ್ಮಿಕರು ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡುವ ವೈದ್ಯರಿದ್ದಂತೆ, ನಿತ್ಯ ನಗರದ ಸ್ವಚ್ಛತೆಗಾಗಿ ಶ್ರಮಿಸುತ್ತಿದ್ದಾರೆ, ಅವರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ದಸಂಸ ರಾಜ್ಯ ಸಂ.ಸಂಚಾಲಕ ಮರಿಯಪ್ಪ ಹಳ್ಳಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ನಗರ ಸಭೆ ವತಿಯಿಂದ ಹಮ್ಮಿಕೊಂಡಿದ್ದ ಮಂಗಳವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಪೌರ ಕಾರ್ಮಿಕರ ಸೇವೆ ಅತ್ಯಂತ ಮಹತ್ವವಾದದ್ದು, ತಮ್ಮ ಆರೋಗ್ಯ ಬದಿಯಿಟ್ಟು ಸಮಾಜದ ಆರೋಗ್ಯಕ್ಕೆ ಸದಾ ಕಂಕಣ ಬದ್ಧರಾಗಿರುತ್ತಾರೆ, ಹಲವು ಕಷ್ಟ ಸಹಿಸಿಕೊಳ್ಳುತ್ತಾರೆ, ನಗರ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕರ ಶ್ರಮ ಶ್ಲಾಘನೀಯ, ಇಂತಹ ಪೌರ ಕಾರ್ಮಿಕರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು
ನಗರದ ನಾಗರಿಕರ ಆರೋಗ್ಯ ಕಾಪಾಡಲು ಶ್ರಮಿಸುತ್ತಿರುವ ಪೌರಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗಿತ್ತಿರುವುದು ನೋವಿನ ಸಂಗತಿ, ಹಾಗಾಗಿ ಪೌರಕಾರ್ಮಿಕರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವ ಜೊತೆಗೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದರಿಂದ ಅವರ ಆರೋಗ್ಯ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ವೇದಿಕೆ ಮೇಲೆ ಕಾಡಾ ಅಧ್ಯಕ್ಷ ಡಾ. ಎಂ.ಎ ರಶೀದ್, ನಗರಸಭೆ ಅಧ್ಯಕ್ಷೆ ಚಂಪಾಬಾಯಿ ಮೇಸ್ತ್ರಿ, ಉಪಾಧ್ಯಕ್ಷೆ ಪಾತಿಮಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷೆ ಪೀರಮ್ಮ ಪಗಲಾಪುರ ಇದ್ದರು. ಸಮಾರಂಭದಲ್ಲಿ ಸದಸ್ಯ ಅಹ್ಮದ ಪಟೇಲ ಸಿಬ್ಬಂದಿ ನಾರಾಯಣ ರೆಡ್ಡಿ, ಪ್ರಭಾಕರ ಕರದಳ್ಳಿ, ಪೌರ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕಣ್ಣಿ, ಅನಿಲಕುಮಾರ, ಉಮೇಶ ದೊಡ್ಮನಿ, ವಿಜಯಕುಮಾರ ಮತ್ತು ರಾಜು ಮೇಸ್ತ್ರಿ, ಮ.ಬಾಕ್ರುದ್ದೀನ್, ಆಶಮ ಖಾನ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ಶರಣಗೌಡ ಪ್ರಸ್ತಾವಿಕವಾಗಿ ಮಾತನಾಡಿದರು, ಸಾಬಣ್ಣ ಸುಂಗುಲ್ಕರ ಸ್ವಾಗತಿಸಿ, ನಿರೂಪಿಸಿದರು, ರಘುನಾಥ್ ನರ್ಸಾಳೆ ವಂದಿಸಿದರು.

