ರೈತ ಸಂಘದ ಸಂಘಟನೆಗೆ ಕೈಜೋಡಿಸಿ: ಮೌನೇಶ್ ಭಂಕಲಗಿ | ಚಿತ್ತಾಪುರ ತಾಲೂಕನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಿಸುವಂತೆ ಆಗ್ರಹಿಸಿ ನಾಳೆ ಪ್ರತಿಭಟನೆಗೆ ನಿರ್ಧಾರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಘಟನೆ (ವಾಸುದೇವ ಮೇಟಿ ಬಣ) ಬಲಪಡಿಸುವ ಉದ್ದೇಶವಿದೆ ಹೀಗಾಗಿ ತಾಲೂಕಿನ ರೈತರೆಲ್ಲರೂ ಕೈಜೋಡಿಸಬೇಕು ಎಂದು ತಾಲೂಕು ಅಧ್ಯಕ್ಷ ಮೌನೇಶ್ ಭಂಕಲಗಿ ಮನವಿ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ನಡೆದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸಂಘದ ಪೂರ್ಣ ಪ್ರಮಾಣದ ಪದಾಧಿಕಾರಿಗಳನ್ನು ಮಾಡಿ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ ಎಲ್ಲಾ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಸಂಘಟನೆಗೆ ಭದ್ರ ಬುನಾದಿ ಹಾಕಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಪದಾಧಿಕಾರಿಗಳ ಒಮ್ಮತದ ಮೇರೆಗೆ ಇದೇ ಸೆ.30 ರಂದು ಚಿತ್ತಾಪುರ ತಾಲೂಕನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಿಸಿ, ಎಕರೆಗೆ 25 ಸಾವಿರ ಬೆಳೆ ಹಾನಿ ಪರಿಹಾರ ನೀಡಬೇಕು ಮತ್ತು ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲು ನಿರ್ಧರಿಸಲಾಯಿತು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ರೈತ ಸಂಘದ ಉಪಾಧ್ಯಕ್ಷರಾದ ಶರಣು ಸಾಹು ತೊನಸನಳ್ಳಿ, ದಶರಥ ದೊಡ್ಡಮನಿ, ವಿಶ್ವರಾಜ್ ನೆನಕಿ, ಕಿಶನ್ ಮೂಕೆ, ರಮೇಶ್ ಬೊಮ್ಮನಳ್ಳಿ, ನಗರಾಧ್ಯಕ್ಷ ವಿಠಲ್ ಕಟ್ಟಿಮನಿ, ದಿಗ್ಗಾಂವ ವಲಯ ಅಧ್ಯಕ್ಷ ಮಲ್ಲಪ್ಪ ಹೊನ್ನಪ್ಪನೋರ್ ಸೇರಿದಂತೆ ಪದಾಧಿಕಾರಿಗಳಾದ ಬಸವರಾಜ ಇಂಗಳಗಿ, ಹಣಮಯ್ಯ ಕಲಾಲ್, ಮಲ್ಲಿಕಾರ್ಜುನ ವಿಜಾಪೂರಕರ್, ಶಿವರಾಮ ಚವ್ಹಾಣ, ಬಸಲಿಂಗಪ್ಪ ಗೌಡ ದಂಡಗುಂಡ, ಯಲ್ಲಾಲಿಂಗ ಸುಲ್ತಾನಪೂರ, ರಾಕೇಶ್ ಮುಗುಳನಾಗಾಂವ, ಮಲ್ಲಣ್ಣಗೌಡ ಸಾತನೂರು, ಚಂದ್ರು ಕಾಶಿ, ಶ್ರೀನಾಥ ಕಾಶಿ, ನಾಗರಾಜ ಅವಂಟಿ ಸೇರಿದಂತೆ ಇತರರು ಇದ್ದರು.

