ಅಲೆಮಾರಿ ಜನಾಂಗದ ಬುರ್ರ ಕಥೆ ಶಾಂತಮ್ಮ ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಬುಡ್ಗ ಜಂಗಮ ಸಮಾಜ ಸರ್ಕಾರಕ್ಕೆ ಮನವಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಜನಪದ ಕಲೆಯಲ್ಲಿ ಅಲೆಮಾರಿ ಜನಾಂಗದ ಬುರ್ರ ಕಥೆ ಒಂದು ಜನಪ್ರಿಯ ಕಲಾ ಪ್ರಕಾರವಾಗಿದ್ದು, ಇಂತಹ ಅಪರೂಪದ ಕಲೆಯನ್ನು ಗ್ರಾಮೀಣ ಭಾಗದಲ್ಲಿ ಉಳಿಸಿ ಬೆಳೆಸುತ್ತಿರುವ ಅಲೆಮಾರಿ ಜನಾಂಗದ ಬುರ್ರ ಕಥೆ ಶಾಂತಮ್ಮ ಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಬೇಕು ಎಂದು ಬುಡ್ಗ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಪಂಡೀತ್ ಶಿರವಾಟಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಮತೀರ್ಥ ಗ್ರಾಮದ ಶಾಂತಮ್ಮ ಕಳೆದ 39 ವರ್ಷಗಳಿಂದ ಬುರ್ರ ಕಥೆ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರಿಂದ ಈ ಭಾಗದಲ್ಲಿ ಎಲ್ಲರೂ ಬುರ್ರ ಕಥೆ ಶಾಂತಮ್ಮ ಎಂದೇ ಗುರುತಿಸುತ್ತಾರೆ.
ಈಗಾಗಲೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇಲ್ಲಿವರೆಗೆ ನೂರಾರು, ಗ್ರಾಮಗಳನ್ನು, ತಾಲೂಕುಗಳನ್ನು, ಜಿಲ್ಲೆಗಳನ್ನು ಸುತ್ತುತ್ತಾ ಪದಗಳು, ಪೌರಾಣಿಕ ಕಥೆಗಳನ್ನು ಮತ್ತು ಬುರ್ರ ಕಥೆಗಳನ್ನು ಹೇಳುತ್ತಾ ಜನರ ಜೀವನದಲ್ಲಿ ಅವರ ಕಷ್ಟಗಳನ್ನು ಕಥೆಗಳ ಮೂಲಕ ದೂರ ಮಾಡುತ್ತಾ ಹಾಗೂ ಜನರನ್ನು ಜಾಗೃತರಾಗಿ ಮಾಡಿದ್ದಾರೆ. ಜನರಿಗೆ ಹಿಂದಿನ ಕಾಲದ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಬುರ್ರ ಕಥೆಗಳ ಮೂಲಕ ತಿಳಿಸುತ್ತಾ ಬಂದಿದ್ದಾರೆ. ತಂಬೂರಿ, ಡಿಮಿಕಿ, ಅಂದೇಲಿ ವಾದ್ಯಗಳ ಮೂಲಕ ಜಾನಪದ ಗೀತೆಯನ್ನು ಹಾಡುತ್ತಾರೆ. ಇವರು ಸುಮಾರು ಹಾಡುಗಳನ್ನು 8 ತಾಸುಗಳಿಂದ 12 ತಾಸುಗಳ ವರೆಗೆ ಹಾಡುವ ಶಕ್ತಿ ಶಾಂತಮ್ಮ ಅವರಲ್ಲಿದೆ ಎಂದು ವಿವರಿಸಿದರು.
ಶಾಂತಮ್ಮ ನವರು ಚಿಕ್ಕ ವಯಸ್ಸಿನಿಂದ ತುಂಬಾ ಕಷ್ಟಗಳನ್ನು ಎದುರಿಸುತ್ತ ಬಂದಿದ್ದಾರೆ ಈ ಕಲೆಗೋಸ್ಕರ ಅವರ ಜೀವನವನ್ನೆ ಮೂಡಿಪಾಗಿಟ್ಟಿದ್ದು ಈ ಕಲೆಯನ್ನು ಬೆಳೆಸಲು ತುಂಬಾ ಕಷ್ಟಗಳನ್ನು ಎದುರಿಸಿದ್ದಾರೆ ಹಾಗೆ ಈ ಕಲೆಯ ಉಳಿವಿಗಾಗಿ ಶ್ರಮಪಟ್ಟಿದ್ದಾರೆ. ಹೀಗಾಗಿ ಇವರ ಕಲೆ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ.
ಬುರ್ರ ಕಥೆ ಶಾಂತಮ್ಮ ಕಲಾ ಸೇವೆಯ ಸಂಕ್ಷಿಪ್ತ ಮಾಹಿತಿ:
ಬುರ್ರ ಕಥೆ ಕಲೆಯನ್ನೇ ನಂಬಿದ ಶಾಂತಮ್ಮ ತಮ್ಮ ಕುಟುಂಬ ನಿರ್ವಹಣೆಗೆ ಆಧಾರಸ್ತಂಭವಾಗಿದ್ದು ಬದುಕು ಕಟ್ಟಿಕೊಟ್ಟಿದೆ. ತಮ್ಮ 14 ವರ್ಷದಿಂದಲೇ ಬುರ್ರ ಕಥೆ ಕಲಾ ಸೇವೆಯಲ್ಲಿ ತೊಡಗಿರುವ ಅವರು ಅನಕ್ಷರಸ್ಥರಾಗಿದ್ದು, ತಮ್ಮ ತಾಯಿಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಮುಂದುವರಿಸಿದ್ದಾರೆ.
ಬುರ್ರ ಕಥೆಗಳು: ಬಾಲ ನಾಗಮ್ಮ, ಬಾಲಗಿರಿ ರಾಜು ಕಥೆ, ಕಾಬುಂಜ ರಾಜು ಕಥೆ, ಶಿವಕುಮಾರ್ ಕಥೆ, ನಳ ನೀಲಾರಾಜ ಕಥೆ, ಚಿತ್ರಶೇಖರ ಸೋಮಶೇಖರ ಕಥೆ, ಆರ್ಯ್ಯಾವಾಳ ಕಥೆ, ಸೌರಮ್ಮ ಕಥೆ ತೆಲಗು-ಕನ್ನಡ, ಯಾನಾಗುಂದಿ ಮಾಣಿಕಮ್ಮ ಕಥೆ ತೆಲಗು-ಕನ್ನಡ, ನಾಲವಾರ ವಕೀಲ ಸಿದ್ದಣ್ಣ ಕಥೆ ತೆಲಗು-ಕನ್ನಡ, ಯಲ್ಲಸತ್ತಿ ತಿಪ್ಪರೆಡ್ಡಿ ಕಥೆ, ರೇಣುಕಾ ಯಲ್ಲಮ್ಮ ಕಥೆ (ಪರಶುರಾಮನ ವಿವರ), ಏಳು ಮಂದಿ ಮಕ್ಕಳು ಭೂ ಲಕ್ಷ್ಮೀ ದೇವಿ ಕಥೆ ತೆಲಗು-ಕನ್ನಡ.
ಜಾನಪದ ಗೀತೆಗಳು: ಸೌರಮ್ಮ ಕಥೆ, ಯಾನಾಗುಂದಿ ಮಾಣಿಕಮ್ಮ ಕಥೆ, ಯಲ್ಲಸತ್ತಿ ತಿಪ್ಪರೆಡ್ಡಿ ಕಥೆ, ನಾಲವಾರ ವಕೀಲ ಸಿದ್ದಣ್ಣ ಕಥೆ.
ಬುರಕಥೆಗೆ ದೊರಕಿದ ಪ್ರಶಸ್ತಿಗಳು: ಬುರ್ರಕಥೆ ಶಾಂತಮ್ಮ ಅವರಿಗೆ ಅನೇಕ ಪ್ರಶಸ್ತಿಗಳು ಮತ್ತು ಗೌರವಗಳು ಸಂದಿವೆ. ಬುಡ್ಗ ಜಂಗಮ ಕಲಾವಿದರ ರಾಜ್ಯಮಟ್ಟದ ಸಮ್ಮೇಳನ 2005, ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ 2009, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಬೆಂಗಳೂರು ಹೆಜ್ಜೆ ಗೆಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ-2016, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಗಡಿನಾಡು ಸಾಂಸ್ಕೃತಿಕ ಉತ್ಸವದಲ್ಲಿ ಪುರಸ್ಕಾರ.
ಭಾರಿಸುವ ವಾದ್ಯಗಳು: ತಂಬೂರಿ, ಡಿಮಿಕಿ, ಅಂದೇಲಿ.
“ಬುಡ್ಗ ಜಂಗಮ ಸಮಾಜ ಅಲೆಮಾರಿ ಸಮಾಜವಾಗಿದ್ದು ಒಂದು ನಿರ್ದಿಷ್ಟ ನೆಲೆ ಇಲ್ಲದ ಜನಾಂಗದಲ್ಲಿ ಬುರ್ರ ಕಥೆ ಎನ್ನುವ ಅಪರೂಪದ ಕಲೆಯಾಗಿದ್ದು, ಈ ಕಲೆ ಸಾಕ್ಷಾತ್ ಶಿವನಿಂದಲೇ ಬಂದ ಕಲೆಯನ್ನು ಈ ಭಾಗದಲ್ಲಿ ಈಗಲೂ ಜೀವಂತವಾಗಿ ಉಳಿಸಿ ಬೆಳೆಸುತ್ತಿರುವ ಬುರ್ರ ಕಥೆ ಶಾಂತಮ್ಮ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸತ್ಕರಿಸಬೇಕು”. ಚನ್ನವೀರ ಕಣವಿ ಜನಪದ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷರು ಚಿತ್ತಾಪುರ.
“ಬುರ್ರ ಕಥೆ ಕಲೆಯನ್ನು ಬಾಲ್ಯದಿಂದಲೇ ತಾಯಿಯಿಂದ ಕಲೆತಿದ್ದು, ಕಳೆದ 39 ವರ್ಷಗಳಿಂದ ಊರೂರು ಅಲೆದು ಬುರ್ರ ಕಥೆಯನ್ನು ಉಳಿಸಿ ಬೆಳೆಸಿದ್ದೇನೆ, ಹೀಗಾಗಿ ಇಂತಹ ಗ್ರಾಮೀಣ ಭಾಗದ ಕಲೆಯನ್ನು ಗುರುತಿಸಿ ನನಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಅಲೆಮಾರಿ ಜನಾಂಗಕ್ಕೆ ನ್ಯಾಯ ಕಲ್ಪಿಸಬೇಕು”.-ಬುರ್ರ ಕಥೆ ಶಾಂತಮ್ಮ ರಾಮತೀರ್ಥ.
