ಕನ್ನಡ ಶ್ರೀ ಪ್ರಶಸ್ತಿ ಪುರಸ್ಕೃತ ಜಮುನಾ ಗುತ್ತೇದಾರ ಅಭಿನಂದನೆ | ಬಹುಮುಖಿ ವ್ಯಕ್ತಿತ್ವಕ್ಕೆ ಸಂದ ಗೌರವ : ಡಾ.ಚಿ.ಸಿ ನಿಂಗಣ್ಣ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ : ಬೆಂಗಳೂರಿನ ಕರ್ನಾಟಕ ವಿಕಾಸ ರಂಗದ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಕನ್ನಡ ಶ್ರೀ  ಪ್ರಶಸ್ತಿ ಪುರಸ್ಕೃತರಾದ ಸಮಾಜ ಸೇವಕಿ ಜಮುನಾ ಅಶೋಕ್ ಗುತ್ತೇದಾರ ಅವರಿಗೆ ಕಲಬುರಗಿಯ ಬ್ರಹ್ಮಶ್ರೀ ನಾರಾಯಣಗುರು ಟ್ರಸ್ಟ್ ವತಿಯಿಂದ ಪದಾಧಿಕಾರಿಗಳ ಸಮ್ಮುಖದಲ್ಲಿ ಅಭಿನಂದಿಸಲಾಯಿತು.

ಕಲಬುರಗಿಯ ಬ್ರಹ್ಮ ಶ್ರೀ ನಾರಾಯಣ ಗುರು ಟ್ರಸ್ಟ್ ಪದಾಧಿಕಾರಿಗಳು ಡಿ. 24 ರಂದು ಅವರ ನಿವಾಸಕ್ಕೆ ತೆರಳಿ ಟ್ರಸ್ಟ್ ಅಧ್ಯಕ್ಷರಾದ ವೆಂಕಟೇಶ್ ಕಡೇಚೂರ ನೇತೃತ್ವದಲ್ಲಿ ಶಾಲು, ಹಾರ ಹಾಗೂ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು.

ಕರ್ನಾಟಕ ವಿಕಾಸ ರಂಗದ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಡಾ. ಚಿ.ಸಿ ನಿಂಗಣ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸಮಾಜದಲ್ಲಿ ಗೌರವದ ಗುತ್ತೇದಾರ ಮನೆತನಕ್ಕೆ ಮೈಸೂರಿನಿಂದ ಸೊಸೆಯಾಗಿ ಬಂದು ಶಿಕ್ಷಣ, ಕೃಷಿ, ಸಂಗೀತ, ಸಾಂಸ್ಕೃತಿಕ, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಬಹುಮುಖಿ ವ್ಯಕ್ತಿತ್ವದ ಮೂಲಕ ಸಮಾಜ ಸೇವಕಿಯಾಗಿ ಜಮುನಾ ಗುತ್ತೇದಾರ ಗುರುತಿಸಿಕೊಂಡಿದ್ದಾರೆ. ಅವರ ಸೇವೆಯು ಇನ್ನಷ್ಟು ಸಮಾಜಮುಖಿಯಾಗಿ ತೆರೆದುಕೊಳ್ಳಲಿ ಮತ್ತು ಅದಕ್ಕೆ ಗೌರವ ರೂಪವಾಗಿ ಈ ಪ್ರಶಸ್ತಿ ಸಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಮಾತನಾಡಿ, ವಿಕೆಜಿ ಸಮೂಹದಲ್ಲಿ ಜಮುನಾ ಗುತ್ತೇದಾರ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಅಶೋಕ್ ಗುತ್ತೇದಾರ ಸ್ಮರಣಾರ್ಥವಾಗಿ ಗ್ರಾಮೀಣ ಪ್ರದೇಶವಾದ ಸ್ಟೇಷನ್ ಗಾಣಗಾಪುರದಲ್ಲಿ ಶಾಲೆ ತೆರೆದು 150ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈಗಾಗಲೇ ಎರಡು ಬಸ್ ಗಳ ಮೂಲಕ ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆಯನ್ನು ಗ್ರಾಮೀಣ ಪ್ರದೇಶದಲ್ಲಿ ನೀಡುತ್ತಿರುವುದು ಬ್ರಹ್ಮಶ್ರೀ ನಾರಾಯಣ ಗುರುಗಳು ಬೋಧಿಸಿದ “ಶಿಕ್ಷಣದಿಂದ ಸ್ವತಂತ್ರರಾಗಿರಿ” ಎಂಬ ತತ್ವದ ಮೇಲೆ ಅವರಿಗಿರುವ ಕಾಳಜಿಗೆ ಸಾಕ್ಷಿ ಎಂದು ಹೇಳಿದರು.

ಸನ್ಮಾನ ನಂತರ ವೆಂಕಟೇಶ್ ಕಡೇಚೂರ ಮಾತನಾಡಿ, ದಿ. ಅಶೋಕ್ ಗುತ್ತೇದಾರ್ ಹೆಸರಲ್ಲಿ ಇನ್ನಷ್ಟು ಸೇವಾ ಕಾರ್ಯಗಳು ಗ್ರಾಮೀಣ ಪ್ರದೇಶದಲ್ಲಿ ವಿಸ್ತಾರಗೊಳ್ಳಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಈಡಿಗ ನೌಕರರ ಸಂಘದ ಮಾಜಿ ಅಧ್ಯಕ್ಷ ವಿಠಲ ಬಾವಗಿ, ಜೀವಾ ಆಸ್ಪತ್ರೆಯ ನಿರ್ದೇಶಕರಾದ ಡಾ.ಅಜಯ್ ಅಶೋಕ ಗುತ್ತೇದಾರ ಹಾಗೂ ಉದ್ಯಮಿ ಅಕ್ಷಯ್ ಅಶೋಕ ಗುತ್ತೇದಾರ್ ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!