ದಿಗ್ಗಾಂವ ಲಿಂ. ಶ್ರೀ ಗುರುಲಿಂಗೇಶ್ವರ ಶಿವಯೋಗಿಗಳ 22ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಶ್ರೀ ಕಾಳಿಕಾ ದೇವಿ ಚರಿತ್ರೆ ಪ್ರವಚನ ಪ್ರಾರಂಭ | ಮಲ್ಲಯ್ಯಸ್ವಾಮಿಗಳು ಅಪಾರ ಭಕ್ತಸಮೂಹ ಹೊಂದಿರುವ ಅಪರೂಪದ ಸ್ವಾಮಿಗಳು: ಕಂಬಳೇಶ್ವರ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ಕಂಚಗಾರ ಹಳ್ಳದ ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದ ಮಲ್ಲಯ್ಯಸ್ವಾಮಿಗಳು ಈ ಭಾಗದ ಅಪಾರ ಭಕ್ತಸಮೂಹ ಹೊಂದಿರುವ ಅಪರೂಪದ ಸ್ವಾಮಿಗಳಾಗಿದ್ದಾರೆ ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ತಾಲೂಕಿನ ದಿಗ್ಗಾಂವ ಸುಕ್ಷೇತ್ರ ಕಂಚಗಾರ ಹಳ್ಳದ ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದಲ್ಲಿ ಲಿಂ. ಶ್ರೀ ಗುರುಲಿಂಗೇಶ್ವರ ಶಿವಯೋಗಿಗಳ 22ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಶುಕ್ರವಾರ ರಾತ್ರಿ ನಡೆದ ಶ್ರೀ ಕಾಳಿಕಾ ದೇವಿ ಚರಿತ್ರೆ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಹೃದಯ ಹೊಂದಿರುವ ಸರಳ ಸಜ್ಜನಿಕೆಯ ಹಾಗೂ ಎಲ್ಲರನ್ನೂ ಸಮಾನವಾಗಿ ಕಾಣುವ ಮಲ್ಲಯ್ಯ ಸ್ವಾಮಿಗಳ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲಿದೆ ಎಂದರು.
ಪಾಳಾ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು ಶ್ರೀ ಕಾಳಿಕಾ ದೇವಿ ಚರಿತ್ರೆ ಕುರಿತು ಪ್ರವಚನ ನೀಡಿದ ಅವರು, ಕಾಳಿಕಾ ದೇವಿಯ ಆರಾಧನೆಯಿಂದ ಜೀವನದಲ್ಲಿ ಭಯ, ಅಭದ್ರತೆಯ ಭಾವನೆ ದೂರಾಗುವುದು. ಜೀವನದ ಎಲ್ಲಾ ಅಡೆತಡೆಗಳು ನಿವಾರಣೆಯಾಗಲಿದೆ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ವೃದ್ಧಿಸುವುದು ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಶ್ರೀ ಪಾರ್ವತಿ ಪರಮೇಶ್ವರ ಕಲ್ಯಾಣ ಧಾಮದ ಮಲ್ಲಯ್ಯಸ್ವಾಮಿ ಸ್ಥಾವರಮಠ ಮಾತನಾಡಿ, ಮಾರ್ಚ್ 2 ರಂದು ಸಾಯಂಕಾಲ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರರ ಅಮೃತ ಹಸ್ತದಿಂದ ನೇರವೆರಲಿದೆ. ಮಾರ್ಚ್ 3 ರಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಕತೃ ಗದ್ದುಗೆಗೆ ಮಹಾರುದ್ರಾಭಿಷೇಕ ಪೂಜಾ ನೆರವೇರಲಿದ್ದು, ಸಾಯಂಕಾಲ 4 ಗಂಟೆಗೆ ಪುರವಂತರ ಆಟದೊಂದಿಗೆ ಸಕಲ ಮಂಗಲ ವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವ ಹಾಗೂ ತದನಂತರ ಶ್ರೀ ಕಾಳಿಕಾ ದೇವಿ ಚರಿತ್ರೆ ಮಹಾಮಂಗಲ ಹಾಗೂ ಧಾರ್ಮಿಕ ಸಭೆ ಜರುಗಲಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಸಿದ್ದಣ್ಣಗೌಡ ಮಾಲಿ ಪಾಟೀಲ, ಭೀಮರಾಯಗೌಡ ಪೊಲೀಸ್ ಪಾಟೀಲ, ವಿಠಲ್ ಗೌಡ ಸೇರಿದಂತೆ ಇತರರು ಇದ್ದರು. ವಿನೋದಕುಮಾರ ದಸ್ತಾಪೂರ ಸಂಗೀತ ಸೇವೆ ಹಾಗೂ ಷಣ್ಮುಖಯ್ಯ ಸ್ವಾಮಿ ಮಠಪತಿ ತಬಲಾ ಸೇವೆ ಸಲ್ಲಿಸಿದರು. ಶಂಭುಲಿಂಗ ಸಂಗಾವಿ ಸ್ವಾಗತಿಸಿದರು, ಶರಣಯ್ಯ ಸ್ವಾಮಿ ಸ್ಥಾವರಮಠ ನಿರೂಪಿಸಿದರು.

