ಶ್ರೀ ಮಾದಾರ ಚೆನ್ನಯ್ಯ ಸೇವಾ ಸಮಿತಿ ಪದಾಧಿಕಾರಿಗಳ ನೇಮಕ | ಮಾದಿಗ ಸಮಾಜದ ಏಳ್ಗೆಗೆ ಸೇವಾ ಮನೋಭಾವನೆ ಅಗತ್ಯ: ಮಂಜುನಾಥ ಹೂಡಿ
ನಾಗಾವಿ ಎಕ್ಸಪ್ರೆಸ್
ಯಾದಗಿರಿ: ಮಾದಿಗ ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಸಂಘಟನಾ ಬಲವರ್ಧನೆ ಹಾಗೂ ಯುವ ಜನರಲ್ಲಿ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಶ್ರೀ ಮಾದಾರ ಚೆನ್ನಯ್ಯ ಸೇವಾ ಸಮಿತಿ ಕೆಲಸ ಮಾಡುತ್ತಿದೆ ಎಂದು ಶ್ರೀ ಮಾದಾರ ಚೆನ್ನಯ್ಯ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಮಂಜುನಾಥ ಹೂಡಿ ಹೇಳಿದರು.
ನಗರದ ಎಸ್ಡಿಎನ್ ಸಭಾಂಗಣದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸೇವಾ ಸಮಿತಿಯ ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಪದಾಧಿಕಾರಿಗಳ ನೇಮಕಾತಿ ಮಾಡಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯಿಂದ ಬಲವಿದೆ. ಇದನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಹೇಳಿದರು.
ಮಾದಿಗ ಸಮುದಾಯದ ಏಳ್ಗೆ ನಮ್ಮೆಲ್ಲರ ಒಗ್ಗಟ್ಟು, ಶಿಕ್ಷಣ ಮತ್ತು ಸೇವಾ ಮನೋಭಾವದಲ್ಲಿ ಅಡಗಿದೆ. ಶಿಕ್ಷಣದ ಜೊತೆಗೆ ಸಮಾಜ ಸೇವೆಯ ಸಂಕಲ್ಪವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜವು ಮುಖ್ಯವಾಹಿನಿಯಲ್ಲಿ ತನ್ನದೇ ಆದ ಸ್ಥಾನವನ್ನು ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಸಬಲಗೊಳ್ಳಬೇಕಾದರೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು. ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮುಂದಿನ ಪೀಳಿಗೆಯನ್ನು ರೂಪಿಸುವ ಕೆಲಸ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ರಾಜ್ಯ ಕಾರ್ಯಾಧ್ಯಕ್ಷ ದೇವಿಂದ್ರನಾಥ್ ಕೆ. ನಾದ್ ಮಾತನಾಡಿ, ಸಮಾಜದ ಏಕತೆ ಮತ್ತು ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದರು. ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಯುವಜನರು ಮುಂಚೂಣಿಯಲ್ಲಿ ನಿಂತು ನಿರ್ವಹಿಸಬೇಕು ಹಾಗೂ ಸಮಾಜದ ಅಭಿವೃದ್ಧಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಡಾ. ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳವರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಸಮಾಜದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ಶ್ರೀ ಮಾದಾರ ಚೆನ್ನಯ್ಯ ಸೇವಾ ಸಮಿತಿಯು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾದಗಿರಿ ಜಿಲ್ಲೆಯ ಈ ನೂತನ ತಂಡವು ಸಮಾಜ ಸೇವೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಕೊಂಡಪಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಮಾದಾರ ಚೆನ್ನಯ್ಯ ಸೇವಾ ಸಮಿತಿಯ ಧ್ಯೇಯೋದ್ದೇಶಗಳು, ಸಂಘಟನೆಯ ಬೆಳವಣಿಗೆ ಹಾಗೂ ರಾಜ್ಯಾದ್ಯಂತ ನಡೆಯುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಹಂತಗಳ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ನೂತನ ಪದಾಧಿಕಾರಿಗಳು:
ಹಣಮಂತ ಇಟಗಿ (ಜಿಲ್ಲಾಧ್ಯಕ್ಷ), ಡಾ. ಶಿವಪ್ಪ ಮುದ್ನಾಳ ಹಾಗೂ ನಂದಪ್ಪ ಪೀರಾಪುರ (ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು), ಭೀಮಶಪ್ಪ ಶನಿವಾರಂ (ಗುರುಮಠಕಲ್ ವಿಧಾನಸಭಾ ಕ್ಷೇತ್ರ ಅಧ್ಯಕ್ಷ), ಶಿವಶರಣಪ್ಪ ಮುದ್ನಾಳ (ಯಾದಗಿರಿ ಅಧ್ಯಕ್ಷ), ವನರಾಜ್ ಶಿರಗೋಳ, ಮಲ್ಲಿಕಾರ್ಜುನ (ಪ್ರಧಾನ ಕಾರ್ಯದರ್ಶಿಗಳು), ಭೀಮರಾಯ ಕರಕಳ್ಳಿ (ಶಹಾಪುರ), ಮಲ್ಲಿಕಾರ್ಜುನ ಮಂದಾಲೆ (ಸುರಪುರ) ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ವಿಭಾಗೀಯ ಉಸ್ತುವಾರಿ ವಿಜಯಕುಮಾರ ಅಡಕಿ, ರಾಜ್ಯ ಕಾರ್ಯದರ್ಶಿ ಭೀಮಶಂಕರ್ ಬಿಲ್ಲವ, ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಿವಪ್ಪ ಮುದ್ನಾಳ್, ನಂದಪ್ಪ ಪೀರಾಪುರ, ಕಾರ್ಯದರ್ಶಿಗಳಾದ ಚಂದ್ರಶೇಖರ್ ಕಡೆಸೂರ್, ಹನುಮಂತ ಅಚ್ಚೋಲ, ಮಲ್ಲಿಕಾರ್ಜುನ್ ಬಬಲಾದಿ, ಮಲ್ಲಿಕಾರ್ಜುನ್ ಮಂದಾಲಿ, ಬಸವರಾಜ್ ಆಗರಟಗಿ, ಪವಾಡಪ್ಪ ಕಕ್ಕೇರ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.
