ಬಟಗೇರಾ (ಬಿ) ಬೃಹನ್ಮಠದ ಶ್ರೀ ಸಿದ್ಧಲಿಂಗೇಶ್ವರರ 8 ನೇ ವರ್ಷದ ಜಾತ್ರಾ ಮಹೋತ್ಸವ | ಜ.27 ರಿಂದ ಜ್ಞಾನಾಮೃತ ಪ್ರವಚನ, ಫೆ.1ಕ್ಕೆ ಭವ್ಯ ರಥೋತ್ಸವ
ನಾಗಾವಿ ಎಕ್ಸಪ್ರೆಸ್
ಸೇಡಂ: ತಾಲೂಕಿನ ಬಟಗೇರಾ (ಬಿ) ಗ್ರಾಮದ ಬೃಹನ್ಮಠದ ಶ್ರೀ ಸಿದ್ಧಲಿಂಗೇಶ್ವರರ 8 ನೇ ವರ್ಷದ ಜಾತ್ರಾ ಮಹೋತ್ಸವ ಸುಕ್ಷೇತ್ರ ಪಂಚಗೃಹ ಹಿರೇಮಠ ದಿಗ್ಗಾಂವ – ನಾಗಾವಿ, ಬೃಹನ್ಮಠ ಬಟಗೇರಾ (ಬಿ) ಪೂಜ್ಯ ಶ್ರೀ ಸಿದ್ಧವೀರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಹಾಗೂ ಗ್ರಾಮದ ಸಮಸ್ತ ಸದ್ಭಕ್ತರ ಇಚ್ಚೆಯ ಮೇರೆಗೆ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ ಎಂದು ವಕ್ತಾರ ಶರಣು ಉಡುಗಿ ತಿಳಿಸಿದ್ದಾರೆ.
ಇದೇ ಜ. 27 ರಿಂದ ಶನಿವಾರ 31 ರವರೆಗೆ ರಾತ್ರಿ 7.30ಕ್ಕೆ ಜ್ಞಾನಾಮೃತ ಪ್ರವಚನ ನಡೆಯುವದು. ಡಾ. ಶಿವಶಂಕರ ಬಿರಾದಾರ ಕೋಟನೂರ (ಬಿ) ಪ್ರವಚನ ನೀಡಲಿದ್ದಾರೆ. ಜಗದೀಶ ಶರಣರು ನಗನೂರು ಸಂಗೀತ ಸೇವೆ ಹಾಗೂ ಜಗದೀಶ ಎಸ್. ದೇಸಾಯಿ ಕಲ್ಲೂರ ಅವರು ತಬಲಾ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಫೆ.1 ರಂದು ಬೆಳಗಿನ ಜಾವ ಶ್ರೀ ಸಿದ್ಧಲಿಂಗೇಶ್ವರ ಹಾಗೂ ಶ್ರೀ ಚನ್ನವೀರೇಶ್ವರರ ಗದ್ದುಗೆಗೆ ರುದ್ರಾಭಿಷೇಕ ಪೂಜೆ ಬಿಲ್ವಾರ್ಚನೆ ಮಂಗಲ. ನಂತರ ಬೃಹನ್ಮಠದಿಂದ ಪಲ್ಲಕ್ಕಿ ಪುರವಂತರ ಸೇವೆಯೊಂದಿಗೆ ವಾದ್ಯವೈಭವ ಸುಮಂಗಲಿಯರ ಆರತಿ, ಸದ್ಭಕ್ತರೊಂದಿಗೆ ಕಮಲಾವತಿ ನಂದಿಯಿಂದ ಗಂಗಾಪೂಜೆ ಮಾಡಿಕೊಂಡು. ಅಗ್ಗಿ ತುಳಿಯುವುದು, ತದನಂತರ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ ಜರುಗುವುದು. ಸಂಜೆ 4 ಗಂಟೆಯಿಂದ ರಥದ ಎಲ್ಲಾ ಸಲಕರಣೆಯೊಂದಿಗೆ ಗ್ರಾಮದ ಪ್ರಮುಖ ರಸ್ತೆಯಿಂದ ಮೆರೆವಣಿಗೆ ಮಾಡಲಾಗುವುದು. ಸಂಜೆ 6.30 ಕ್ಕೆ ಭವ್ಯ ರಥೋತ್ಸವ ಜರಗುವುದು ಎಂದು ಮಾಹಿತಿ ನೀಡಿದ್ದಾರೆ.
ಫೆ.6 ರಂದು ಸಂಜೆ 6.30 ಕ್ಕೆ ಕಳಸ ಇಳಿಸುವ ಕಾರ್ಯಕ್ರಮ ನಂತರ ಸರ್ವರಿಗೂ ಪ್ರಸಾದ ವಿತರಣೆ ಜರುಗುವುದು. ಶ್ರೀ ಸಿದ್ಧಲಿಂಗೇಶ್ವರ ಬೃಹನ್ಮಠದ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

