ಭರತನೂರ: ಲಿಂ.ಗುರುನಂಜೇಶ್ವರ ಶಿವಯೋಗಿಗಳ ಪುರಾಣಕ್ಕೆ ಚಾಲನೆ, ಪುರಾಣಗಳು ಮಾನವನ ಏಳಿಗೆಗೆ ಪೂರಕ: ಹುಲಸೂರ ಶ್ರೀ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಪುರಾಣ-ಪ್ರವಚನಗಳು ನಮ್ಮ ನಾಡಿನ, ದೇಶದ ಸಾಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳು ಮಾನವನ ಏಳಿಗೆಗೆ ಪೂರಕವಾಗಿವೆ ಎಂದು ಹುಲಸೂರಿನ ಗುರು ಬಸವೇಶ್ವರ ಮಠದ ಡಾ.ಶಿವಾನಂದ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಭರತನೂರ ಗ್ರಾಮದ ಗುರುನಂಜೇಶ್ವರ ಮಠದಲ್ಲಿ ಪೂಜ್ಯ ಮಹಾತಪಸ್ವಿ ಲಿಂಗೈಕ್ಯ ಗುರುನಂಜೇಶ್ವರ ಮಹಾಶಿವಯೋಗಿಗಳ 31ನೇ ಪುಣ್ಯಸ್ಮರಣೆ ಹಾಗೂ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳ ನಿರಂಜನ ಚರ ಪಟ್ಟಾಧಿಕಾರದ 25ನೇ ರಜತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಲಿಂ.ಗುರುನಂಜೇಶ್ವರ ಶಿವಯೋಗಿಗಳ ಪುರಾಣಕ್ಕೆ ಚಾಲನೆ ನೀಡಿ ಅವರು ಆಶಿರ್ವಚನವನ್ನು ನೀಡುತ್ತಿದ್ದರು.
ಪುರಾಣಗಳಿಂದ ನಮ್ಮ ಪುರಾತನ ಪುರ್ವಜರ ಇತಿಹಾಸವನ್ನರಿತುಕೊಳ್ಳುವ ಮೂಲಕ ನಮ್ಮ ಮುಂದಿನ ನವ ಪೀಳಿಗೆಗಳಿಗೆ ಉತ್ತಮ ಸಂಸ್ಕಾರ ನೀಡಿ, ಸಮಾಜದಲ್ಲಿ ಸಂಘ ಜೀವಿಗಳಾಗಿ ಬದುಕುವಂತೆ ಪ್ರೇರಣೆ ನೀಡುತ್ತವೆ ಎಂದರು.
ಇದಕ್ಕೂ ಮುಂಚೆ ರಾಜಾಪೂರ ಗ್ರಾಮದಿಂದ ಭರತನೂರ ಗ್ರಾಮದ ಮಠದವರೆಗೆ 31ಎತ್ತಿನ ಬಂಡಿಯಲ್ಲಿ ಲಿಂ. ಗುರುನಂಜೇಶ್ವರ ಮಹಾಶಿವಯೋಗಿಗಳ ಬೆಳ್ಳಿ ಮೂರ್ತಿಯ ಕುಂಭ, ಕಳಸದ ಭವ್ಯ ಮೆರವಣಿಗೆ ಜರುಗಿತು.
ತಾಲೂಕಿನ 31ಪ್ರಗತಿಪರ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಮಠದ ಪಿಠಾದೀಪತಿ ಪೂಜ್ಯ ಶ್ರೀಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ನೇತೃತ್ವ ವಹಿಸಿ ಆಶಿರ್ವಚನ ನೀಡಿದರು. ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ವೇದಮೂರ್ತಿ ಪಂಡಿತ ಮಲ್ಲಿಕಾರ್ಜುನ ಶಾಸ್ತ್ರೀ ಐನಾಪುರ ಪುರಾಣ ವಾಚನ ಮಾಡಿದರು. ಸಂಗಮೇಶ ಪಾಟೀಲ ಕಲಬುರಗಿ, ಪ್ರವೀಣ ಪಂಚಾಳ ಚಿಟಗುಪ್ಪ ಹಾಗೂ ಶಣ್ಮುಖಯ್ಯ ಹಿರೇಮಠ ಅವರ ತಂಡದಿಂದ ಸಂಗೀತ ಸೇವೆ ನಡೆಯಿತು.
ರಟಕಲ್ ನಡುವಿನ ಮಠದ ರೇವಣಸಿದ್ದ ಶಿವಾಚಾರ್ಯರು, ಜಿಪಂ.ಮಾಜಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ ಕೋಡ್ಲಿ, ರಾಜಾಪೂರ ಗ್ರಾಪಂ.ಅಧ್ಯಕ್ಷ ಪ್ರಕಾಶರೆಡ್ಡಿ ಪಿರೆಡ್ಡಿ, ಮುರುಗಯ್ಯಸ್ವಾಮಿ ಮಠಪತಿ, ಜಗದೀಶ ಪಾಟೀಲ, ನಾಗರಾಜ ಗದ್ದಿ, ಭೀಮರಾಯ ಕುಡ್ಡಳ್ಳಿ, ಶರಣಗೌಡ ಭಂಟನಳ್ಳಿ, ಭೋಗಪ್ಪ ಕಿಣ್ಣಿ, ಮಲ್ಲಾರೆಡ್ಡಿ ಎಚಿ, ಅಣವೀರಪ್ಪ ಪೋಲಿಸ್ ಪಾಟೀಲ, ಕಾಳಗಿ ಎ ಎಸ್ ಐ ಶ್ರೀನಿವಾಸ ರೆಡ್ಡಿ, ಶಾಮರಾಯ ಮಂಗಲಗಿ, ಗೋವಿಂದ ರೆಡ್ಡಿ, ಸತೀಷ ಶಾವಿನ, ಸಂಗರೆಡ್ಡಿ ಕೌಳಾಸ, ರೇವಣಸಿದ್ದ ಕುಡ್ಡಳ್ಳಿ, ಭೋಗಪ್ಪ ಮನ್ನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

