ಭೀಮಣ್ಣ ಸಾಲಿ ಅವರಿಗೆ ಎಂಎಲ್ಸಿ ಮಾಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ: ಇಬ್ರಾಹಿಂ ನಾಯ್ಕೋಡಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬ್ಲಾಕ್ ಕಾಂಗ್ರೆಸ್ ಮತ್ತು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಾಗುವುದು ಎಂದು ಕಾಂಗ್ರೆಸ್ ಸೇವಾದಳದ ಉಪಾಧ್ಯಕ್ಷ ಇಬ್ರಾಹಿಂ ನಾಯ್ಕೋಡಿ ಸಾತನೂರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಾಗೂ ಕೋಲಿ ಸಮಾಜದ ಹಿರಿಯ ಮುಖಂಡರು, ಅನುಭವಿಗಳು, ನಿಷ್ಠಾವಂತ ನಾಯಕರು, ಎಲ್ಲ ಜಾತಿ ಜನಾಂಗದವರನ್ನು ಸಮಾನವಾಗಿ ನೋಡುವ ಧೀಮಂತ ನಾಯಕ ಭೀಮಣ್ಣ ಸಾಲಿ ಅವರು 50 ವರ್ಷಗಳ ಕಾಲ ರಾಜಕೀಯ ಜೀವನ ಕಾಂಗ್ರೆಸ್ ಪಕ್ಷದಲ್ಲೇ ಕಳೆದಿದ್ದಾರೆ. ಬೇರೆ ಪಕ್ಷಗಳಿಂದ ಎಷ್ಟೇ ಆಸೆ ಆಮಿಷಗಳು ಬಂದರೂ ಸಹ ಕಾಂಗ್ರೆಸ್ ಬಿಟ್ಟು ಅಳುಗಾಡಿಲ್ಲ, ಕಾಂಗ್ರೆಸ್ ಪಕ್ಷವೇ ನನ್ನ ಧರ್ಮ ಎಂದು ತಿಳಿದು ಮುನ್ನಡೆದಿದ್ದಾರೆ ಎಂದು ಹೇಳಿದ್ದಾರೆ.
ಇಂತಹ ಪ್ರಾಮಾಣಿಕ ಪಕ್ಷ ನಿಷ್ಠೆಯ ಭೀಮಣ್ಣ ಸಾಲಿ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಇದರಿಂದ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಹಾಗೂ ಎಲ್ಲಾ ಸಮಾಜಗಳಿಗೂ ಅನುಕೂಲವಾಗಲಿದೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಸ್ವಲ್ಪ ಮುತುವರ್ಜಿ ವಹಿಸಿ ಎಂಎಲ್ಸಿ ಹುದ್ದೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

