ಬಿಎಸ್’ವೈ ಅಭಿಮಾನೋತ್ಸವ ಚಿತ್ರದುರ್ಗ ಚಲೋ: ನಿಂಗಪ್ಪ ಹುಳಗೋಳಕರ್
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 50 ವರ್ಷಗಳ ಸುದೀರ್ಘ ರಾಜಕೀಯ ಪಯಣ ಮತ್ತು ಅವರ ದಣಿವರಿಯದ ನಾಯಕತ್ವವನ್ನು ಆಚರಿಸುವ ಅಭಿಮಾನೋತ್ಸವದಲ್ಲಿ ಶಹಾಬಾದ ಬಿಜೆಪಿ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರಿಗೆ ಒಂದು ಭಾವನಾತ್ಮಕ ಮತ್ತು ಹೆಮ್ಮೆಯ ಕ್ಷಣವಾಗಿದೆ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ನಿಂಗಪ್ಪ ಹುಳಗೋಳಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 9 ರಂದು ಚಿತ್ರದುರ್ಗದ ಹೊರವಲಯದ ಚೆನ್ನಯ್ಯ ಮಠದ ಪಕ್ಕದ ಆವರಣದಲ್ಲಿ ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಹಾಬಾದ ಮಂಡಲ ದಿಂದ ಸುಮಾರು 100 ಕಾರ್ಯಕರ್ತರು, ಅಭಿಮಾನಿಗಳು ಭಾಗಿಯಾಗಲಿದ್ದಾರೆ ಎಂದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಿ.ಎಸ್. ಯಡಿಯೂರಪ್ಪನವರನ್ನು ಸನ್ಮಾನಿಸಲಿದ್ದಾರೆ, ಕರ್ನಾಟಕ ರಾಜಕಾರಣದಲ್ಲಿ ‘ರಾಜಾಹುಲಿ’ ಎಂದೇ ಖ್ಯಾತರಾದ ಬಿ.ಎಸ್.ವೈ ಅವರ ಈ ಸಾರ್ಥಕ ಹಾದಿಯು ಶೂನ್ಯದಿಂದ ಶಿಖರಕ್ಕೆ ಬಿಜೆಪಿ ಪಕ್ಷವನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಇವರೇ ಕಾರಣಿಕರ್ತರು, ಸೋಲನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡ ಬಿ.ಎಸ್.ವೈ, ಕರ್ನಾಟಕದ ರಾಜಕಾರಣದಲ್ಲಿ ಎಂದಿಗೂ ಅಳಿಸಲಾಗದ ಹೆಸರು, ಅವರ ದಣಿವರಿಯದ ಹೋರಾಟದ ಗುಣ ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ನಮ್ಮ ನೆಚ್ಚಿನ ನಾಯಕನ 50 ವರ್ಷಗಳ ಸಾರ್ಥಕ ಪಯಣವನ್ನು ಕಣ್ತುಂಬಿಕೊಳ್ಳಲು ಶಹಾಬಾದನಿಂದ ಹೊರಡುತ್ತಿರುವ ಕಾರ್ಯಕರ್ತರು, ಈ ಅಭಿಮಾನೋತ್ಸವವು ಕೇವಲ ಒಂದು ಸಮಾರಂಭವಲ್ಲ, ಬದಲಿಗೆ ಅವರ ಹೋರಾಟದ ಹಾದಿಗೆ ಅಭಿಮಾನಿಗಳು ಸಲ್ಲಿಸುತ್ತಿರುವ ಪ್ರೀತಿಯ ಕಾಣಿಕೆಯಾಗಿದೆ, ರಾಜ್ಯದಾದ್ಯಂತ ಸುಮಾರು ಲಕ್ಷಾಂತರ ಜನರು ಸೇರುವ ನಿರೀಕ್ಷೆಯಿದೆ ಎಂದು ನಿಂಗಪ್ಪ ಹುಳಗೋಳಕರ್ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ದೇವದಾಸ ಜಾಧವ, ದಿನೇಶ ಗೌಳಿ ಇದ್ದರು.
ವರದಿ-ನಾಗರಾಜ್ ದಂಡಾವತಿ.

