ಚಿತ್ತಾಪುರ ಡಿಗ್ರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ | ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ನಾಗಲಕ್ಷ್ಮೀ ಚೌದರಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಜೀವನವು ಅತೀ ಅಮೂಲ್ಯವಾದ ಸಮಯವಾಗಿರುತ್ತದೆ. ಈ ಸಮಯದಲ್ಲಿ ನೀವೆಲ್ಲರೂ ದುಶ್ಚಟಗಳಿಂದ ದೂರವಿದ್ದು ಉತ್ತಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೊಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ತಂದೆ ತಾಯಿಯರು ತಮ್ಮ ಜೀವನವನ್ನೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಮುಡುಪಾಗಿಟ್ಟಿರುತ್ತಾರೆ. ಅವರು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಮೋಸ ಮಾಡದೇ ವಿದ್ಯಾರ್ಥಿಗಳು ಯಾವಾಗ ಸಾಮಾನ್ಯರಲ್ಲಿ ಆಸಾಮಾನ್ಯರಾಗಿ ಬದುಕಿ ಮೊಬೈಲ್ ಬಳಕೆ, ದುಶ್ಚಟಗಳು, ಪ್ರೀತಿ ಪ್ರೇಮ ವಿಷಯದಿಂದ ದೂರವಿದ್ದು ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳ ಕುರಿತು ತಿಳುವಳಿಕೆ ಮತ್ತು ಅದನ್ನು ಪ್ರಶ್ನಿಸುವ ಮತ್ತು ಓದಿನ ಹಸಿವು ಹೆಚ್ಚಿಸಿಕೊಂಡು ಸಾಧಿಸುವ ಛಲ ಹೆಚ್ಚಿಸಿಕೊಳ್ಳಬೇಕು ಅಂದಾಗ ಮಾತ್ರ ಅವರು ಮುಂದೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇತ್ತಿಚೆಗೆ ಯುವಕರು ಮೊಬೈಲ್ ಗೀಳಿಗೆ, ದುಶ್ಚಟಗಳಿಗೆ ಒಳಗಾಗಿ ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಅದನ್ನು ಬಿಟ್ಟು ಮುಂದೆ ಗುರಿ ಹಿಂದೆ ಗುರು ಎನ್ನುವ ಸಿದ್ದಾಂತದಲ್ಲಿ ಸರ್ಕಾರವು ಶಿಕ್ಷಣಕ್ಕೆ ನೀಡುತ್ತಿರುವ ಸೌಲಭ್ಯ ಮತ್ತು ಸವಲತ್ತುಗಳನ್ನು ಪಡೆದುಕೊಂಡು ಉತ್ತಮ ವ್ಯಾಸಂಗ ಮಾಡಬೇಕು ಎಂದರು.
ತಹಸೀಲ್ದಾರ ನಾಗಯ್ಯ ಹಿರೇಮಠ, ತಾಪಂ ಇಓ ಆಕ್ರಂ ಪಾಶಾ, ಸಿಡಿಪಿಓ ಆರತಿ ತುಪ್ಪದ, ಪಿಎಸ್ಐ ಮಂಜುನಾಥ ರೆಡ್ಡಿ, ಬಿಇಓ ಶಶಿಧರ ಬಿರಾದಾರ, ಟಿಎಚ್ಓ ಡಾ.ವೀರನಾಥ ವೇದಿಕೆಯಲ್ಲಿದ್ದರು. ಕಾಲೇಜಿನ ಪ್ರಾಚಾರ್ಯ ಡಾ, ಮಲ್ಲಿಕಾರ್ಜುನ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಡಾ. ಸೂಗೂರೆಶ್ವರ ಪ್ರಾರ್ಥಿಸಿದರು, ಮಲ್ಲಪ್ಪ ಮಾನೇಗಾರ ಸ್ವಾಗತಿಸಿದರು, ಸಂಗಪ್ಪ ಮಾಮನಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

