ಚಿತ್ತಾಪುರ ಪುರಸಭೆ ಸ್ಥಾಯಿ ಸಮಿತಿ ಸಭೆಯಲ್ಲಿ ಕೋರಂ ಅಭಾವದಿಂದ ಸಭೆ ರದ್ದು, ಅಧ್ಯಕ್ಷರಿಗೆ ಮುಖಭಂಗ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪುರಸಭೆ ಸ್ಥಾಯಿ ಸಮಿತಿ ಸಭೆಯಲ್ಲಿ ಕೋರಂ ಅಭಾವದಿಂದ ಸಭೆ ರದ್ದಾಗಿದ್ದರಿಂದ ಅಧ್ಯಕ್ಷ ಜಗದೀಶ ಚವ್ಹಾಣ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಜಗದೀಶ ಚವ್ಹಾಣ ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ಸ್ಥಾಯಿ ಸಮಿತಿ ಸಭೆಗೆ ಹಾಜರಾಗಬೇಕಾದ ನಾಲ್ಕು ಜನ ಸದಸ್ಯರು ಗೈರು ಹಾಜರಾಗಿದ್ದರು, ಹೀಗಾಗಿ ಕೇವಲ ಅಧ್ಯಕ್ಷರು ಮಾತ್ರ ಹಾಜರಿದ್ದರು, ಎಷ್ಟೇ ಸಮಯದವರೆಗೆ ಕಾದರೂ ಯಾವೊಬ್ಬ ಸದಸ್ಯ ಇತ್ತಕಡೆ ಸುಳಿಯಲೇ ಇಲ್ಲ ಹೀಗಾಗಿ ಸ್ಥಾಯಿ ಸಮಿತಿ ಸಭೆ ಅನಿವಾರ್ಯವಾಗಿ ಮುಂದೂಡಲ್ಪಟ್ಟಿತ್ತು.
ಸ್ಥಾಯಿ ಸಮಿತಿ ರಚನೆಯಾಗಿ ಬರೀ ಎರಡು ವಾರ ಕಳೆದಿದೆ. ಪ್ರಥಮ ಸಭೆಯಲ್ಲಿಯೇ ಕೋರಂ ಅಭಾವದಿಂದ ಸಭೆ ಮುಂದೂಡಿಕೆ ಆಗಿರುವುದು ಪುರಸಭೆ ಪಡಸಾಲೆಯಲ್ಲಿ ಗುಸು ಗುಸು ಚರ್ಚೆ ನಡೆದಿದೆ.
ಸಭೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸ್ವೀಕೃತವಾದ ಅರ್ಜಿಗಳ ಕುರಿತು ಚರ್ಚೆ ಹಾಗೂ ಇನ್ನಿತರ ವಿಷಯಗಳು ಅಧ್ಯಕ್ಷರ ಅಪ್ಪಣೆಯ ಮೇರೆಗೆ ಚರ್ಚೆಯಾಗಬೇಕಿತ್ತು.
“ಪುರಸಭೆ ಸ್ಥಾಯಿ ಸಮಿತಿ ಸಭೆ ಕುರಿತು ಕಳೆದ ಜೂನ್ 20 ರಂದೇ ಎಲ್ಲಾ ಐದು ಜನ ಸದಸ್ಯರಿಗೆ ನೋಟಿಸ್ ಕಳುಹಿಸಲಾಗಿದೆ, ಆದರೆ ಜೂ.23 ರಂದು ನಿಗದಿಯಾಗಿದ್ದ ಸಭೆಗೆ ಅಧ್ಯಕ್ಷರು ಒಬ್ಬರೆ ಹಾಜರಿದ್ದರು ಉಳಿದವರು ಗೈರು ಹಾಜರಾಗಿದ್ದರು ಹೀಗಾಗಿ ಸಭೆಯಲ್ಲಿ ಕೋರಂ ಅಭಾವದಿಂದ ಸಭೆ ಮುಂದೂಡಲಾಗಿದೆ”.-ಮನೋಜಕುಮಾರ ಗುರಿಕಾರ ಮುಖ್ಯಾಧಿಕಾರಿ ಪುರಸಭೆ ಚಿತ್ತಾಪುರ.
“ಪುರಸಭೆ ಸ್ಥಾಯಿ ಸಮಿತಿ ಸಭೆಗೆ ಹಾಜರಾಗಬೇಕಾದ ನಾಲ್ಕು ಜನ ಸದಸ್ಯರು ಒಂದೊಂದು ಕಾರಣದಿಂದ ಗೈರು ಹಾಜರಾಗಿದ್ದಾರೆ ಹೀಗಾಗಿ ಸಭೆ ಮುಂದೂಡಲಾಗಿದೆ, ಮತ್ತೇ ಬರುವ ವಾರದಲ್ಲಿ ಸಭೆ ನಿಗಧಿ ಮಾಡಲಾಗುವುದು ಮತ್ತು ಗೈರು ಹಾಜರಾದ ಸದಸ್ಯರನ್ನು ಕರೆಯಿಸಿ ಮಾತನಾಡಲಾಗುವುದು”.-ಜಗದೀಶ ಚವ್ಹಾಣ ಸ್ಥಾಯಿ ಸಮಿತಿ ಅಧ್ಯಕ್ಷರು.

