ಚಿತ್ತಾಪುರ ತಹಸೀಲ್ದಾರ್ ಅವರಿಗೆ ವಾಲ್ಮೀಕಿ ಸಮಾಜ ಮನವಿ | ವಾಲ್ಮೀಕಿ ಸಮಾಜವನ್ನು ನಿಂದಿಸಿ ಅವಮಾನಿಸಿದ ರಮೇಶ ಕತ್ತಿ ವಿರುದ್ಧ ದಲಿತ ದೌರ್ಜನ್ಯದಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಭೀಮರಾಯ ದೊರೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಹರ್ಷಿ ವಾಲ್ಮೀಕಿ ಸಮಾಜವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ ಮಾಜಿ ಸಂಸದ ರಮೇಶ ಕತ್ತಿ ಇವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾನೂನಿನಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ಶ್ರೀ ಮಹರ್ಷಿ ವಾಲ್ಮೀಕಿ ಸಮಾಜ ನೇತೃತ್ವದಲ್ಲಿ ತಹಸೀಲ್ ಕಚೇರಿಯ ಎದುರು ಮಂಗಳವಾರ ಪ್ರತಿಭಟಿಸಿದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಜಿ.ಪರಮೇಶ್ವರ ಅವರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಈ ವೇಳೆ ತಾಲೂಕು ಅಧ್ಯಕ್ಷ ಭೀಮರಾಯ ದೊರೆ ಮಾತನಾಡಿ, ಅ. 19 ರಂದು ಬಿಎಕೆ ಮಾಡೇಲ್ ಹೈಸ್ಕೂಲ್ ಮೈದಾನದಲ್ಲಿ ಡಿ.ಸಿ.ಸಿ ಬ್ಯಾಂಕಿನ ಚುನಾವಣಾ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಡಿ.ಸಿ.ಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬೆಲ್ಲದ ಬಾಗೇವಾಡಿಯ ರಮೇಶ ವಿಶ್ವನಾಥ ಕತ್ತಿ ವಾಲ್ಮೀಕಿ ಸಮುದಾಯದವರನ್ನು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಅಮಾನಿಸಿದ್ದರಿಂದ ರಾಜ್ಯಾದ್ಯಂತ 75 ಲಕ್ಷ ವಾಲ್ಮೀಕ ಸಮುದಾಯದ ಮನಸ್ಸಿಗೆ ತೀವ್ರ ಘಾಸಿ ಆಗಿದೆ. ಮೇಲಾಗಿ ನಮ್ಮ ಭಾವನೆಗಳಿಗೆ ದಕ್ಕೆ ಆಗಿರುವುದಲ್ಲದೆ ತೀವ್ರ ಅಘಾತವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿದೆ. ಈಗಾಗಲೇ ರಮೇಶ ಕತ್ತಿ ಹುಕ್ಕೇರಿ ವಿದ್ಯುತ್ ಮಂಡಳಿ ಚುನಾವಣೆಯಲ್ಲಿ ಕಳೆದ ಮೂರು ಬಾರಿ ಸತತವಾಗಿ ವಾಲ್ಮೀಕಿ ಸಮುದಾಯಕ್ಕೆ ಅವಹೇಳನಕಾರಿಯಾಗಿ ಬಿಂಬಿಸುವ ಕೆಲಸ ಸತತವಾಗಿ ಮಾಡಿರುತ್ತಾನೆ. ಅದಲ್ಲದೆ ಈಗಾಗಲೇ ಈತ ಸತತವಾಗಿ ಕೆಳ ಸಮುದಾಯಗಳ ಭಾವನೆಗಳಿಗೆ ಘಾಸಿ ಉಂಟು ಮಾಡಿರುತ್ತಾರೆ. ಕಾರಣ ದಲಿತ ಸಮುದಾಯದ ಭಾವನಗಳಿಗೆ ದಕ್ಕೆ ತಂದಿರುವ ಈತನ ಮೇಲೆ ದೌರ್ಜನ್ಯ ತಡೆ ಕಾಯ್ದೆ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಅಧ್ಯಕ್ಷ ರಾಜು ದೊರೆ, ಮುಖಂಡರಾದ ಭೀಮರಾವ್ ದೊರೆ, ಮಹಾದೇವಪ್ಪ ಚೂರಿ, ಸಂಜಯ ಬುಳಕರ್, ಸಾಬಣ್ಣ ಮುಸಲಾ, ಭಾಗಪ್ಪ ದೊರೆ ಮೊಗಲಾ, ಭಾಗಪ್ಪ ನಾಯ್ಕೋಡಿ, ಸಾಬಣ್ಣ ಕುಂಬಾರಹಳ್ಳಿ, ಚಂದ್ರಕಾಂತ ದೊರೆ ಮೊಗಲಾ, ಈರಣ್ಣ ದೊರೆ, ಹಣಮಂತ ಗಿಲಗಿನ್, ತಾಯಪ್ಪ ದೊರೆ, ಚಂದ್ರು ನಾಯ್ಕೋಡಿ, ಮೊನಪ್ಪ ದೊರೆ, ರಾಯಪ್ಪ ದೊರೆ, ರಮೇಶ್ ಕೋರವಾರ, ದೇವಿಂದ್ರಪ್ಪ ನಾಯಕ, ಶಿವಶರಣಪ್ಪ ಸುಬೇದಾರ್, ವಿಶಾಲ್ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂತರ ಆರಕ್ಷಕ ಉಪನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
“ವಾಲ್ಮೀಕಿ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಬೇಕು”.-ಭೀಮರಾಯ ದೊರೆ ವಾಡಿ ಮಹರ್ಷಿ ವಾಲ್ಮೀಕಿ ಸಮಾಜ ತಾಲೂಕು ಅಧ್ಯಕ್ಷರು.

