ಡಿಎಪಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ರಸಗೊಬ್ಬರ ಅಂಗಡಿಗಳ ಹಾಗೂ ಟಿಎಪಿಸಿಎಂಎಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಸಂಘ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ರಸಗೊಬ್ಬರ ಅಂಗಡಿಗಳ ವ್ಯಾಪಾರಿಗಳು, ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘ ಇವರು ಡಿಎಪಿಯನ್ನು ಕಾಳಸಂತೆಯಲ್ಲಿ ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದು ಮೇಲಾಗಿ ತಮಗೆ ಬೇಕಾದವರಿಗೆ ಕೊಡುವುದು ಬೇಕಾಗದವರಿಗೆ ಕೊಡದೆ ಇರುವುದು ಹೀಗಾಗಿ ರೈತರಿಗೆ ಮೋಸ ಮಾಡುತ್ತಿರುವ ರಸಗೊಬ್ಬರ ಅಂಗಡಿಗಳ ಹಾಗೂ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಂಘದ ಮೇಲೆ ಕ್ರಮ ಕೈಗೊಂಡು ರೈತರಿಗೆ ಸರಿಯಾದ ದರದಲ್ಲಿ ಯಾವುದೇ ತೊಂದರೆ ಆಗದಂತೆ ಡಿಎಪಿ ಮಾರಾಟ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಮುಖಂಡರು ಮಂಗಳವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ತಾಲೂಕು ಅಧ್ಯಕ್ಷ ಮೌನೇಶ್ ಭಂಕಲಗಿ ಮಾತನಾಡಿ, ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು ರೈತರು ಬಿತ್ತನೆ ಮಾಡುವಾಗ ರೈತರಿಗೆ ರಸಗೊಬ್ಬರ ಬೇಕಾಗಿರುತ್ತದೆ. ಆದರೆ ರೈತರಿಗೆ ಸರಿಯಾದ ದರದಲ್ಲಿ ಮಾರಾಟ ಮಾಡದೆ ಕಾಳಸಂತೆಯಲ್ಲಿ ಹೆಚ್ಚಿನ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮಾಲಿಕರು ಹಾಗೂ ತಾಲೂಕಾ ಒಕ್ಕಲುತನ ಹುಟ್ಟವಳಿ ಸಹಕಾರ ಸಂಘದ ವಿರುದ್ಧ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.
ಸದರಿ ರಸಗೊಬ್ಬರಗಳ ಕುರಿತು ಯಾವ ಅಂಗಡಿಯಲ್ಲಿ ದರ ಪಟ್ಟಿ ನಾಮಫಲಕ ಅಳವಡಿಸಿರುವುದಿಲ್ಲ. ತಮಗೆ ಬೇಕಾದವರಿಗೆ ರಸಗೊಬ್ಬರ ಕೊಡುವುದು ಬೇಕಾಗದವರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿ ರೈತರಿಂದ ಹಣ ದೋಚುತ್ತಿದ್ದಾರೆ, ಆದ್ದರಿಂದ ಕೂಡಲೇ ರೈತರಿಗೆ ರಸಗೊಬ್ಬರ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ ನಿವಾರಿಸಿ ಹಾಗೂ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಂಡು ಅಂತಹ ಅಂಗಡಿಗಳ ಪರವಾನಿಗೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಸದರಿ ವಿಷಯದ ಕುರಿತು 2-3 ದಿನಗಳಲ್ಲಿ ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಗ್ರಸ್ವರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಗೌರವಾಧ್ಯಕ್ಷ ಶಾಂತಕುಮಾರ ಮಳಖೇಡ, ದಶರಥ್ ದೊಡ್ಡಮನಿ, ಗುರುನಾಥ್ ಅಲ್ಲೂರ, ಚಂದ್ರಶೇಖರ್ ಅವಂಟಿ, ಉಮೇಶ್ ಸಾತನೂರ, ಕಾಶಿನಾಥ ವಿಶ್ವಕರ್ಮ ಸೇರಿದಂತೆ ಇತರರು ಇದ್ದರು.

