ಹಲಚೇರಾ ಜಗದೀಶ್ವರ ದೇವಾಲಯ ಕಳಸಾರೋಹಣ | ಶ್ರೀಕಾಂತ ಚೌಕಾ ಪರಿವಾರದ ಧಾರ್ಮಿಕ ಸೇವೆ ಶ್ಲಾಘನೀಯ: ಭರತನೂರ ಶ್ರೀ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ಹಲಚೇರಾ ಗ್ರಾಮದಲ್ಲಿ ಜಗದೀಶ್ವರ ದೇವಾಲಯ ಜೀರ್ಣೋದ್ಧಾರಗೊಳಿಸಿದ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಸಾವಿತ್ರಿ ಶ್ರೀಕಾಂತ ಚೌಕಾ ಪರಿವಾರದ ಧಾರ್ಮಿಕ ಸೇವೆ ಶ್ಲಾಘನೀಯ ಎಂದು ಭರತನೂರ ಚಿಕ್ಕಗುರುನಂಜೇಶ್ವರ ಮಹಾ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ತಾಲೂಕಿನ ಹಲಚೇರಾ ಗ್ರಾಮದಲ್ಲಿ ಗುರುವಾರ ನೂತನ ಜಗದೀಶ್ವರ ದೇವಾಲಯ ಕಳಸಾರೋಹಣ, ಆಮೆ, ನಂದಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಮಾನವನ ಜೀವನ ಸಾರ್ಥಕವಾಗಬೇಕಾದರೆ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ಪುಣ್ಯಕಾರ್ಯಗಳು ಮಾಡಬೇಕೆಂದರು. ಶ್ರೀಕಾಂತ ಚೌಕಾ ಅವರು ಅತ್ಯಂತ ಕಷ್ಟಪಟ್ಟು ಬಡತನ ಮೆಟ್ಟಿ ನಿಂತು ಅಭ್ಯಾಸ ಮಾಡಿ ಎಂಜಿನಿಯರ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ವಿಶ್ರಾಂತ ಜೀವನ ಅತ್ಯಂತ ನೆಮ್ಮದಿಯಿಂದ ನಡೆಸುತ್ತಿದ್ದಾರೆ. ಇವರ ಸಾಮಾಜಿಕ ಕಾಳಜಿ, ಧಾರ್ಮಿಕ ನಂಬಿಕೆ ಇತರರಿಗೆ ಮಾದರಿಯಾಗಿದೆ ಎಂದರು.
ಹೊಸಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಮಾತನಾಡಿ, ದಿನ ಬೆಳಗಾದರೆ ದ್ವೇಷ ಅಸೂಯೆ ಕೊಲೆ ಸುಲಿಗೆ ಹೆಚ್ಚಾಗಿವೆ. ಸಮಾಜ ಇವುಗಳಿಂದ ಮುಕ್ತವಾಗಬೇಕಾದರೆ ಪ್ರತಿಯೊಬ್ಬರಲ್ಲೂ ಧಾರ್ಮಿಕ ನಂಬಿಕೆ ಅವಶ್ಯಕ ಎಂದು ತಿಳಿಸಿದರು.
ಜವಾಹರ ಬಾಲಭವನ ಉಪಾಧ್ಯಕ್ಷ ಅನಿಲಕುಮಾರ ಜಮಾದಾರ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಂದ ಮನುಷ್ಯ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಲು ದೈವದಲ್ಲಿ ಭಕ್ತಿ, ನಂಬಿಕೆ, ಪೂಜಾ ಕಾರ್ಯಗಳ ಬಗೆಗೆ ಮಕ್ಕಳಿಗೆ ಸಂಸ್ಕಾರ ಅಗತ್ಯವಿದೆ. ಮೋಬೈಲಗಳಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಹೇಳಿದರು.
ಪ್ರಮುಖರಾದ ಶ್ರೀಕಾಂತ ಚೌಕಾ, ಸರಸ್ವತಿ ಚೌಕಾ, ಡಾ. ಕಿರಣ ಚೌಕಾ, ಉಮಾ ಪಾಟೀಲ, ಸಂಗಮೇಶ ಹೂಗಾರ, ರಮೇಶ, ಅಶೋಕ ಮಾನಕಾರ, ರಾಜಶೇಖರ ಅಪ್ಪಾಜಿ, ಗುರುನಾಥ ವಿಂಬಡಶೆಟ್ಟಿ, ಸೋಮಶೇಖರ ಚಿಂಚೋಳಿ, ರಾಜಶೇಖರ ಗಾರಂಪಳ್ಳಿ, ರಾಜು ಹೆಬ್ಬಾಳ, ಸಿದ್ದರಾಜ ಪುಣ್ಯಶೆಟ್ಟಿ, ಜಗದೀಶ ಸಜ್ಜನ, ಶಿವಾನಂದ ಮಾನಕಾರ, ಜಗನ್ನಾಥ ಶೇರಿಕಾರ, ಮಲ್ಲಿನಾಥ ಪಾಟೀಲ ಕಾಳಗಿ ಮೊದಲಾದವರು ಇದ್ದರು. ಸಿದ್ದು ಚೌಕಾ ಸ್ವಾಗತಿಸಿದರು, ಗುರುನಾಥ ವಿಂಬಡಶೆಟ್ಟಿ ನಿರೂಪಿಸಿದರು, ಚನ್ನಮಲ್ಲಪ್ಪ ಮಳಖೇಡ ವಂದಿಸಿದರು.

