ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಎರಡು ಪುಸ್ತಕಗಳು ಲೋಕಾರ್ಪಣೆ, ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಯ ಅಭಾವ: ಮುಕುಂದರಾಜ್
ನಾಗಾವಿ ಎಕ್ಸಪ್ರೆಸ್
ಮಂಡ್ಯ: ನಗರದಲ್ಲಿ ಇಂದು ಆರಂಭವಾದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜಮುಖಿ ಪ್ರಕಾಶನದ ತೇಜಸ್ವಿ ಸಾಹಿತ್ಯ ಕುರಿತ ವಿಮರ್ಶಾ ಸಂಕಲನ ವಿಸ್ಮಯ ವಿಮರ್ಶೆ ಕೃತಿ ಹಾಗೂ ಲೋಹಿಯಾ ಪ್ರಕಾಶನದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ: ಏಕೆ ಬೇಕು? ಹೇಗೆ ಸಾಧ್ಯ? ಪುಸ್ತಕಗಳನ್ನು ಜನಾರ್ಪಣೆ ಮಾಡಲಾಯಿತು.
ಪುಸ್ತಕಗಳನ್ನು ಬಿಡುಗಡೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ಮಾತನಾಡಿ, ವಿಮರ್ಶೆಯ ಅಭಾವವನ್ನು ಎದುರಿಸುತ್ತಿರುವ ಕನ್ನಡ ಸಾಹಿತ್ಯ ಸಂದರ್ಭದಲ್ಲಿ, ಅದರಲ್ಲೂ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಕುರಿತು ಹೊರ ಬಂದಿರುವ ‘ವಿಸ್ಮಯ ವಿಮರ್ಶೆ’ ಕೃತಿಗೆ ವಿಶೇಷ ಮಹತ್ವ ಇದೆ ಎಂದು ತಿಳಿಸಿದರು.
ಇನ್ನೊಬ್ಬ ಅತಿಥಿ ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಅವರು ಮಾತನಾಡಿ, ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಅನುಷ್ಠಾನ ಎದುರಿಸುತ್ತಿರುವ ಸವಾಲುಗಳನ್ನು ಪ್ರಸ್ತಾಪಿಸಿದರು. ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ನಾಟಕಕಾರ ನಾಡುನುಡಿ ಚಿಂತಕರಾದ ಜಯರಾಮ್ ರಾಯಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ಕೃತಿಗಳ ಪ್ರಸ್ತುತತೆ ಬಗ್ಗೆ ವಿವರಿಸಿದರು. ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಉಪಸ್ಥಿತರಿದ್ದರು.
