ಹುಂಡಿಯಲ್ಲಿ ಮಲೇಷ್ಯಾ ಕರೆನ್ಸಿ ಪತ್ತೆ | ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ರೂ. 14.73 ಲಕ್ಷ ಹಣ ಸಂಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸರ್ಕಾರದ ಮುಜರಾಯಿ ಇಲಾಖೆಯಡಿ ಬರುವ ನಾಗಾವಿ ನಾಡಿನ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಶನಿವಾರ ತಹಸೀಲ್ದಾರ್ ನಾಗಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ಜರುಗಿತು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಎಣಿಕೆ ಪ್ರಕ್ರಿಯೆಯು ಸತತವಾಗಿ ಸಂಜೆ 5 ಗಂಟೆಯವರೆಗೆ ನಡೆಯಿತು.
ಕಳೆದ 2025 ಆಗಸ್ಟ್ 4 ರಿಂದ 2026 ರ ಫೆಬ್ರವರಿ 21 ರ ವರೆಗಿನ ಅವಧಿಯಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆಯಿಂದ ಒಟ್ಟು 14,73,160 ರೂಪಾಯಿ ಸಂಗ್ರಹವಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷರು ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ವಿದೇಶಿ ಕರೆನ್ಸಿ ಆಕರ್ಷಣೆ:
ಈ ಬಾರಿಯ ಹುಂಡಿ ಎಣಿಕೆಯಲ್ಲಿ ವಿಶೇಷವಾಗಿ ಮಲೇಷ್ಯಾ ದೇಶದ ಕರೆನ್ಸಿ ಪತ್ತೆಯಾಗಿರುವುದು ಕಂಡುಬಂದಿದೆ. ಭಕ್ತರೊಬ್ಬರು ಮಲೇಷಿಯಾದ 1 ರಿಂಗಿಟ್ ಮುಖಬೆಲೆಯ 18 ನೋಟುಗಳನ್ನು ಹುಂಡಿಗೆ ಹಾಕಿದ್ದಾರೆ. ಭಾರತೀಯ ರೂಪಾಯಿ ಮೌಲ್ಯಕ್ಕೆ ಹೋಲಿಸಿದರೆ (1 ರಿಂಗಿಟ್ = 23.26 ರೂ.) ಇದರ ಒಟ್ಟು ಮೊತ್ತ 418.68 ರೂಪಾಯಿಗಳಾಗುತ್ತದೆ.
ಇದರ ಜೊತೆಗೆ ಮಲೇಷ್ಯಾ ದ 10 ಸೇನ್ (Sen) ಮುಖಬೆಲೆಯ 2 ನಾಣ್ಯಗಳು ಕೂಡ ಲಭ್ಯವಾಗಿವೆ. ಅಂತರಾಷ್ಟ್ರೀಯ ಮಾರುಕಟ್ಟೆ ದರದ ಅನ್ವಯ 20 ಸೇನ್ನ ಮೌಲ್ಯ ಸುಮಾರು 4.65 ರೂಪಾಯಿಗಳಾಗಲಿದ್ದು, ವಿದೇಶಿ ಕರೆನ್ಸಿಯ ಒಟ್ಟು ಮೊತ್ತ ಅಂದಾಜು 423.33 ರೂಪಾಯಿಗಳಾಗಲಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದ್ದಾರೆ.
ಹಣ ಸಂಗ್ರಹ ವಿವರ:
ಹುಂಡಿಯಲ್ಲಿ ರೂ.500 ಮುಖಬೆಲೆಯ 556 ನೋಟು, ರೂ.200 ಮುಖಬೆಲೆಯ 455 ನೋಟು, ರೂ.100 ಮುಖಬೆಲೆಯ 4,011 ನೋಟು, ರೂ.50 ಮುಖಬೆಲೆಯ 5,012 ನೋಟು, ರೂ.20 ಮುಖಬೆಲೆಯ 10,733 ನೋಟು, ರೂ.10 ಮುಖಬೆಲೆಯ 14,480 ರೂ.5 ಮುಖಬೆಲೆಯ 9400 ನಾಣ್ಯ, ರೂ.2 ಮುಖಬೆಲೆಯ ರೂ.14000, ರೂ.1 ಮುಖಬೆಲೆಯ ರೂ.18,000 ನಾಣ್ಯಗಳು ಸೇರಿದಂತೆ ಒಟ್ಟು ರೂ.14,73,160 ಹಣ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹುಂಡಿಯಲ್ಲಿ ಸಂಗ್ರಹವಾದ ಹಣ ಸರ್ಕಾರಕ್ಕೆ ಸೇರಿದ್ದಾಗಿದ್ದು, ಈ ಹಣವನ್ನು ಪಟ್ಟಣದ ಕೃಷ್ಣಾ ಗ್ರಾಮೀಣ ಬ್ಯಾಂಕ್ನಲ್ಲಿ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ಹುಂಡಿ ಎಣಿಕೆ ಕಾರ್ಯದಲ್ಲಿ ಗ್ರೇಡ್ 2 ತಹಸೀಲ್ದಾರ್ ರಾಜಕುಮಾರ್ ಮರತೂರಕರ್, ಶಿರಸ್ತೇದಾರ್ ಅಶ್ವತ್ಥನಾರಾಯಣ, ಕಾರ್ಯದರ್ಶಿ ಸುಬಾನ್, ಕಂದಾಯ ನಿರೀಕ್ಷಕ ಮೈನೋದ್ದಿನ್, ಮಾರ್ಥಂಡ್ ಮುಡಬೂಳ, ಶಂಕರ್ ಸೇರಿದಂತೆ ಬ್ಯಾಂಕ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

