ಅಖಿಲ ಕರ್ನಾಟಕ ನಾಟಕ ಲೇಖಕರ ಸಂಘದ ಉದ್ಘಾಟನೆ | ಸಮಾಜ ಸುಧಾರಣೆಯಲ್ಲಿ ನಾಟಕಗಳ ಪಾತ್ರ ಪ್ರಮುಖ: ಕಲ್ಲಯ್ಯಜ್ಜನವರು
ನಾಗಾವಿ ಎಕ್ಸಪ್ರೆಸ್
ಗದಗ: ರಂಗಭೂಮಿ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಮಾಜ ಸುಧಾರಣೆಯಲ್ಲಿ ನಾಟಕಗಳ ಪಾತ್ರ ಪ್ರಮುಖವಾಗಿದೆ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು ಹೇಳಿದರು.
ಗದಗ ವೀರೇಶ್ವರ ಪುಣ್ಯಾಶ್ರಮದಲ್ಲಿ ಭಾನುವಾರ ಆಯೋಜಿಸಿದ ಅಖಿಲ ಕರ್ನಾಟಕ ನಾಟಕ ಲೇಖಕರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಪೂಜ್ಯರು, ಪಂ.ಪುಟ್ಟರಾಜ ಗವಾಯಿಗಳವರು ಸ್ವತಃ ಕವಿಗಳಾಗಿದ್ದರು. ಅವರ ಪುಣ್ಯ ಕ್ಷೇತ್ರದಲ್ಲಿ ಸಂಘ ಉದ್ಘಾಟನೆ ಆಗುತ್ತಿರುವುದು ಸಂತಸದ ವಿಷಯ. ನಾಟಕ ಕವಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಘ ಕಾರ್ಯ ಪವೃತ್ತವಾಗಲಿ ಎಂದು ಹಾರೈಸಿದರು.
ಸಂಘದ ರಾಜ್ಯಾಧ್ಯಕ್ಷ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ ಮಾತನಾಡಿ, ನಾಟಕ ಆಯೋಜಕರು ಕವಿಯ ಒಪ್ಪಿಗೆ ಪಡೆದು ನಾಟಕ ಪ್ರದರ್ಶನ ಮಾಡುವುದರ ಜೊತೆಗೆ ಕವಿ ಕಾಣಿಕೆ ಸಲ್ಲಿಸಬೇಕು. ನಾಟಕ ಲೇಖಕರ ಭದ್ರತೆಗಾಗಿ 2 ಲಕ್ಷ ರೂಪಾಯಿಯ ಗುಂಪು ವಿಮಾ ಯೋಜನೆ ಸೌಲಭ್ಯ ಉಚಿತವಾಗಿ ನೀಡುವ ನಿಟ್ಟಿನಲ್ಲಿ ಸಂಘದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಿ ಆದೇಶ ಪತ್ರ ವಿತರಿಸಲಾಯಿತು. ಹಿರಿಯ ರಂಗಕರ್ಮಿ ಪ್ರಕಾಶ ಕಡಪಟ್ಟಿ, ಪತ್ರಕರ್ತ ಶಿವಾನಂದ ಹಿರೇಮಠ, ಸೋಮಶೇಖರ ಸೊಗಲದ, ಬಸ್ಸಯ್ಯ ಸ್ವಾಮಿ ಮುತ್ತಲಗೇರಿ, ವೀರೇಶ ಹೂಗಾರ ಸೇಡಂ, ಪದಾಧಿಕಾರಿಗಳಾದ ಸಂತೋಷ ನಾಯಕ, ರಾಜ್ ಮಹ್ಮದ್ ಬಾದಾಮಿ,, ಗೋವಿಂದಗೌಡ, ಮಂಜುನಾಥ ಹಿರೇಮಠ, ಶಿವರುದ್ರಯ್ಯ ಹಿರೇಮಠ, ಸದಾಶಿವ ಚನ್ನಾಳ, ಮಲ್ಲಪ್ಪ ಹಿರೇಗೌಡ, ಮಹೇಶ ಮಠಪತಿ, ಶಿವಕುಮಾರ್ ಚಂದ್ರಗಿರಿ, ಸಂಗಣ್ಣ ಅಲ್ದಿ, ರಾಜಶೇಖರ ಮಂಗಲಗಿ ಸೇರಿ ಇನ್ನಿತರರು ಉಪಸ್ಥಿತರಿದ್ದರು. ಎಚ್.ವಾಯ್. ವಡ್ಡರ ಸ್ವಾಗತಿಸಿದರು, ಮಲ್ಲಿಕಾರ್ಜುನ ಮೇಟಿ ನಿರೂಪಿಸಿದರು, ಜಿ.ಎಂ.ಮೋಹನ್ ವಂದಿಸಿದರು.

