ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮ | ಅಪರಾಧ ತಡೆಗಟ್ಟಲು ಪೊಲೀಸರಿಗೆ ಸಹಕರಿಸಿ : ಶಂಕರಗೌಡ ಪಾಟೀಲ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಸಮಾಜದಲ್ಲಿ ನಡೆಯುವಂತಹ ಅನೇಕ ಅಪರಾಧ ಕೃತ್ಯಗಳನ್ನು ತಡೆಯಲು ಸಾರ್ವಜನಿಕರು ಪೊಲೀಸರಿಗೆ ಸಹಕರಿಸಬೇಕು ಎಂದು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು.
ತಾಲೂಕಿನ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯಲ್ಲಿ ರಾಜ್ಯ ಪೊಲೀಸ್, ಕಲಬುರಗಿ ಜಿಲ್ಲಾ ಪೊಲೀಸ್ ಹಾಗೂ ವಾಡಿ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಿಂದ ಆದಷ್ಟು ದೂರವಿರಬೇಕು. ಮೊಬೈಲ್ ಬಳಕೆಯನ್ನು ವಿದ್ಯಾರ್ಥಿ ಜೀವನದಲ್ಲಿ ಬಳಸದೆ ಇರುವುದು ಉತ್ತಮ ಎಂದು ಹೇಳಿದರು.
ಶಾಲಾ ಹಂತದಲ್ಲಿಯೇ ಮಕ್ಕಳು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ದುರಂತ. ಅತಿಯಾದ ಸಾಮಾಜಿಕ ಜಾಲತಾಣಗಳ ಬಳಕೆ, ಗೊತ್ತಿರದೆ ಇರುವ ಲಿಂಕ್ ಗಳನ್ನು ತೆರೆಯುವುದು, ಆನ್ಲೈನ್ ಗೇಮ್ ಗಳನ್ನು ಆಡುವುದು, ಪೋಸ್ಕೊ ಪ್ರಕರಣಗಳು ಇಂತಹ ಅನೇಕ ಚಟುವಟಿಕೆಗಳು ಮಕ್ಕಳನ್ನು ಶೋಷಣೆ ಮಾಡುತ್ತಿವೆ ಎಂದು ಬಾಲ್ಯವಿವಾಹ, ಬಾಲಕಾರ್ಮಿಕತೆ, ಲೈಸನ್ಸ್ ಇಲ್ಲದೇ ವಾಹನ ಚಲಾಯಿಸುವುದು ಮುಂತಾದ ಸಾಮಾಜಿಕ ಸಮಸ್ಯೆಗಳನ್ನು ನಿಯಂತ್ರಿಸಲು ಜನರ ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ವಾಡಿ ಅಪರಾಧ ವಿಭಾಗದ ಪಿಎಸ್ಐ ರೇಣುಕಾ ಉಡಗಿ ಮಾತನಾಡಿ, ಹೆಣ್ಣು ಮಕ್ಕಳು ತಮಗೆ ಶಿಕ್ಷಕರಿಂದ, ಸಹಪಾಠಿಗಳಿಂದ ಅಸಹಜ ಪ್ರತಿಕ್ರಿಯೆ ಬಂದಾಗ ನಮ್ಮನ್ನು ಸಂಪರ್ಕಿಸಿ, ಯಾರೊಂದಿಗೂ ಅತಿ ಸಲುಗೆಯಿಂದ ವರ್ತಿಸಬೇಡಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಾಡಿ ಪೊಲೀಸ್ ಠಾಣೆ ಪಿಎಸ್ಐ ತಿರುಮಲೇಶ್ ಕುಂಬಾರ ಅವರು, ಮಕ್ಕಳಿಗೆ ನಡೆಯುತ್ತಿರುವ ಅಪರಾಧ ಕೃತ್ಯಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿಯೊಂದರಲ್ಲೂ ಜಾಗರುಕರಾಗಿ ಇರಬೇಕು. 112 ಇದು ಪೊಲೀಸ್ ಸಹಾಯವಾಣಿ, 1098 ಮಕ್ಕಳ ಸಹಾಯವಾಣಿ. ನಿಮಗೆ ತೊಂದರೆ ಆದಾಗ ಇವುಗಳ ಸಹಾಯ ಪಡೆಯಿರಿ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಎತ್ತಿನ ಬಂಡಿಗಳಿಗೆ ರೆಡಿಯಂ ಹಚ್ಚುವ ಮೂಲಕ ಎತ್ತಿನ ಬಂಡಿಗಳ ಅಪಘಾತ ಬಗ್ಗೆ ರೈತರಲ್ಲಿ ಜಾಗೃತಿ ಮುಡಿಸಲಾಯಿತು. ನಂತರ ಮನೆ ಮನೆಗೆ ಪೊಲೀಸ್ ಎನ್ನುವ ಕಾರ್ಯಕ್ರಮ ಮಾಡಲಾಯಿತು. ವೇದಿಕೆ ಮೇಲೆ ಸಂಸ್ಥೆಯ ಚೆನ್ನಣ್ಣ ಬಾಳಿ, ಶಿವಲಿಂಗಪ್ಪ ವಾಡೆದ್, ಅಣ್ಣಾರಾವ್ ಬಾಳಿ, ಈಶ್ವರಪ್ಪ ಬಾಳಿ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಎ.ಎಸ್.ಐ ಗುಂಡಪ್ಪ ಕೊಗನೂರ್, ಗಣ್ಯರಾದ ಗುರುನಾಥ ಗುದಗಲ್, ಶರಣು ಜ್ಯೋತಿ, ಬಂದಗಿಸಾಬ್, ಗುರು ಗುತ್ತೇದಾರ, ಪೇದೆಗಳಾದ ಲಕ್ಷ್ಮಣ್, ರಸೂಲ್ ಖಾನ್, ಆರಿಫ್, ಜ್ಯೋತಿ, ಮಾಲನಬೀ ಸೇರಿದಂತೆ ಇತರರು ಇದ್ದರು. ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.

