ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಕೇಂದ್ರ ಜಲಶಕ್ತಿ ಸಚಿವರಿಗೆ ಪತ್ರ | ಜಲಜೀವನ್ ಮಿಷನ್ ಕಾಮಗಾರಿಗಳಿಗೆ ಕೇಂದ್ರದ ಅತ್ಯಲ್ಪ ಅನುದಾನ, ಕಾಮಗಾರಿಗಳು ಸ್ಥಗಿತಗೊಳ್ಳುವ ಸಾಧ್ಯತೆ

ನಾಗಾವಿ ಎಕ್ಸಪ್ರೆಸ್

ಬೆಂಗಳೂರು: ಕರ್ನಾಟಕ ರಾಜ್ಯವು ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದು, ಕೇಂದ್ರ ಸರ್ಕಾರ ರಾಜ್ಯಕ್ಕೆ ಮಂಜೂರು ಮಾಡಿರುವ ಅನುದಾನ ಅತ್ಯಂತ ಕಡಿಮೆಯಾಗಿದ್ದು ಇದು ಕೇಂದ್ರ ಸರ್ಕಾರದ ಪಾಲಿನ ಅತಿ ದೊಡ್ಡ ಕೊರತೆಯನ್ನು ತೋರುತ್ತದೆ ಹಾಗೂ ರಾಜ್ಯ ಸರ್ಕಾರದ ಪ್ರಗತಿಪರ ಕಾಮಗಾರಿಗಳಿಗೆ ಅಡ್ಡಿಯಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಜಲಜೀವನ್ ಮಿಷನ್ ಯೋಜನೆಯ ಆರ್ಥಿಕ ಪ್ರಗತಿ ರೂ.35,698.58 ಕೋಟಿಗಳಾಗಿದ್ದು, ಅನುಮೋದಿತ ವೆಚ್ಚ ರೂ.69,487.60 ಕೋಟಿಗಳಾಗಿದೆ. ಒಟ್ಟು 35,698.58 ಕೋಟಿ ರೂಪಾಯಿ ವೆಚ್ಚದಲ್ಲಿ, ರಾಜ್ಯದ ಪಾಲು 24,598.45 ಕೋಟಿ ರೂಪಾಯಿಗಳಾಗಿದ್ದರೆ, ಕೇಂದ್ರ ಪಾಲು ಕೇವಲ 11,786.63 ಕೋಟಿ ರೂಪಾಯಿಗಳಾಗಿದೆ ಎಂದು ಪತ್ರದಲ್ಲಿ ತಿಳಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಇದು ಕೇಂದ್ರ ಸರ್ಕಾರದ ಪಾಲಿನ ದೊಡ್ಡ ಕೊರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದು, ಈ ಹಣಕಾಸು ವರ್ಷದಲ್ಲಿಯೂ ಸಹ, ರಾಜ್ಯ ಸರ್ಕಾರವು 1,500.00 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ, ಆದರೆ ಇಲ್ಲಿಯವರೆಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ ಶೂನ್ಯವಾಗಿದೆ, ಯಾವುದೇ ಸಂಭಾವ್ಯ ವಿಳಂಬವನ್ನು ತಗ್ಗಿಸಲು ಮತ್ತು ಕೇಂದ್ರ ಸರ್ಕಾರದ ನಿಧಿಯ ನಿರೀಕ್ಷೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮುಂದುವರಿಸಲು ರಾಜ್ಯ ಸರ್ಕಾರವು ಪೂರ್ವಭಾವಿಯಾಗಿ ಹಣವನ್ನು ವಿತರಿಸಿದೆ ಎಂಬ ಸಂಗತಿಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಈ ಹಣಕಾಸು ವರ್ಷದಲ್ಲಿ ರಾಜ್ಯವು ಬಜೆಟ್ ಹಂಚಿಕೆಗಳು ಮತ್ತು ಸಕಾಲಿಕ ಬಿಡುಗಡೆಗಳ ಮೂಲಕ ಈ ಯೋಜನೆಯನ್ನು ಪೂರ್ವಭಾವಿಯಾಗಿ ಬೆಂಬಲಿಸುತ್ತಿದೆ, ಇದರಲ್ಲಿ ರೂ.11,050.00 ಕೋಟಿ ಹಂಚಿಕೆಯಾಗಿದೆ, ಕೇಂದ್ರ ಅನುದಾನಗಳ ಸಕಾಲಿಕ ಬಿಡುಗಡೆ ಸೇರಿದಂತೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈ ಯೋಜನೆಗೆ ಭಾರತ ಸರ್ಕಾರದಿಂದ ನಿರಂತರ ಬೆಂಬಲದ ಅಗತ್ಯವಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಸುಮಾರು 1700.00 ಕೋಟಿ ರೂಪಾಯಿಗಳ ಬಿಲ್ಗಳು ಪಾವತಿಗೆ ಬಾಕಿ ಉಳಿದಿವೆ ಮತ್ತು 2600.00 ಕೋಟಿ ರೂಪಾಯಿಗಳ ಬಿಲ್ಗಳು ಪೈಪ್ಲೈನ್ನಲ್ಲಿವೆ. ಈ ಪಾವತಿಗಳು ಮತ್ತಷ್ಟು ವಿಳಂಬವಾದರೆ ಕೆಲಸಗಳು ನಿಧಾನವಾಗುವ / ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು,  ಕೆಲವು ಗುತ್ತಿಗೆದಾರರು ಈಗಾಗಲೇ ಸಿಬ್ಬಂದಿಯನ್ನು ಕಡಿಮೆ ಮಾಡಲು ಪ್ರಾರಂಭಿಸಿದ್ದಾರೆ, ಇದು ಕೆಲಸದ ಪ್ರಗತಿಗೆ ಗಂಭೀರ ಅಡ್ಡಿಯಾಗುತ್ತಿದೆ ಎಂದಿದ್ದಾರಲ್ಲದೆ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕಾಮಗಾರಿಗಳನ್ನು ಸಕಾಲಿಕವಾಗಿ ಪೂರ್ಣಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ತನ್ನ ಪಾಲನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕೆಂದು ವಿನಂತಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!