ದಲಿತ ಚಳುವಳಿ ನಾಲ್ಕು ದಶಕಗಳ ಜನಾಂದೋಲನದ ಬೃಹತ್ ಸಮಾವೇಶ | ಜನರ ಬದುಕು ಕಟ್ಟಿದ್ದು ಸಂವಿಧಾನವೇ ಹೊರತು ಪಂಚಾಂಗವಲ್ಲ: ನಿಜಗುಣಾನಂದ ಸ್ವಾಮಿಜೀ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ಮನುಷ್ಯ ಮತ್ತು ಮನುಷ್ಯತ್ವದ ಬಗ್ಗೆ ಮಾತನಾಡಿದವರು ಬುದ್ಧ, ಬಸವ, ಅಂಬೇಡ್ಕರ್ ರವರು, ಈ ದೇಶದ ಜನರ ಬದುಕು ಕಟ್ಟಿದ್ದು ಸಂವಿಧಾನವೇ ಹೊರತು ಪಂಚಾಂಗವಲ್ಲ ಎಂದು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಸ್ವಾಮಿಜೀ ಹೇಳಿದರು.
ನಗರದ ಹೈ ಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ದಲಿತ ಚಳುವಳಿ ನಾಲ್ಕು ದಶಕಗಳ ಜನಾಂದೋಲನದ ಬೃಹತ್ ಸಮಾವೇಶದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಲಿತರು ಸಂವಿಧಾನದಿಂದ ವಿಮುಖರಾಗಿ ಪಂಚಾಂಗದ ಕಡೆಗೆ ವಾಲುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವುದೇ ನಮ್ಮೆಲ್ಲರ ಕರ್ತವ್ಯವಾಗಿದೆ. ಡಿಜೆ ಮೆರವಣಿಗೆ ಬೇಡ, ವಿಚಾರಗಳ ಮೆರವಣಿಗೆ ಆಗಬೇಕು, ಅರವಿನ ಉತ್ಸವವಾಗಬೇಕು, ಡಿಜಿ ಸಾಗರ್ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಈ ಶಹಾಬಾದ ನೆಲದಿಂದಲೇ ವ್ಯವಸ್ಥೆಯ ವಿರುದ್ಧ ಹೋರಾಟ ಮತ್ತೊಮ್ಮೆ ಚಿಗುರಲಿ ಎಂದು ಹಾರೈಸಿದರು.
ಡಿಎಸ್ಎಸ್ ರಾಜ್ಯ ಸಂಚಾಲಕ ಡಾ.ಡಿ.ಜಿ ಸಾಗರ ಮಾತನಾಡಿ, ದಲಿತರ ಶೋಷಣೆ ಮುಕ್ತ, ಮೌಢ್ಯತೆ ವಿರುದ್ದ, ರಕ್ಷಣೆಗಾಗಿಯೇ ಸ್ಥಾಪನೆಗೊಂಡ ಕದಸಂಸ ಜಿಲ್ಲೆಯಲ್ಲಿ 4 ದಶಕಗಳು ಕಳೆದಿವೆ, ಸಂಘಟನೆಗಾಗಿ ಹಲವಾರು ಕಾರ್ಯಕರ್ತರು ಮತ್ತು ನಾಯಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಟ ಮಾಡಿದ್ದಾರೆ ಹಾಗೆ ಪ್ರಾಣ ಕೂಡ ಕಳೆದು ಕೊಂಡಿದ್ದಾರೆ, 4 ದಶಕಗಳಿಂದ ಸಂಘಟನೆಗೆ ಬಲ ತುಂಬಿದ ಎಲ್ಲಾ ಚಳುವಳಿಗಾರರಿಗೆ ಅಭಿನಂದನೆ ಸಲ್ಲಿಸಿದರು.
ವೇದಿಕೆ ಮೇಲೆ ಅಪ್ಪಗೇರೆ ಸೋಮಶೇಖರ, ಸುರೇಶ ಬಬಲಾದ, ಮರಿಯಪ್ಪ ಹಳ್ಳಿ, ಡಿ.ಡಿ ಓಣಿ, ಶ್ರೀಧರ ಸಾರವಾಡ, ಸುರೇಶ ಹಾದಿಮನಿ, ಬಿಸಿ ವಾಲಿ, ಎಚ.ಶಂಕರ, ಪಿ.ಐ ಪರಶುರಾಮ ವನಂಜಕರ, ಮೃತ್ಯುಂಜಯ ಹಿರೇಮಠ, ಮಲ್ಲಿಕಾರ್ಜುನ ಜಲಂದರ, ಶಂಕರಗೌಡ ಪಾಟೀಲ, ಸಾಬಮ್ಮ ಕಾಳಗಿ, ರಾಜೇಶ ಯನಗುಂಟಿಕರ, ಶಂಕರ ಜಾನಾ ಇದ್ದರು. ರಾಮಕುಮಾರ ಸಿಂಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.
ದಲಿತ ಚಳುವಳಿಯ ಸಂಘಟಕರಿಗೆ ಸನ್ಮಾನ :
ದಲಿತ ಸಂಘಟನೆ ಹುಟ್ಟಿದಾಗಿನಿಂದ ಚಳುವಳಿಗಾಗಿ ತಮ್ಮ ಸರ್ವಸ್ವ ತ್ಯಾಗ ಮಾಡಿದ ಚಳುವಳಿಯ ಹಿರಿಯ ಹೋರಾಟಗಾರರಾದ ಡಾ. ಕೆ.ಗುರುಲಿಂಗಪ್ಪ, ಎಚ.ಶಂಕರ, ಬಿ.ಸಿ ವಾಲಿ, ಮಲ್ಲಿಕಾರ್ಜುನ ಜಲಂದರ, ಈಶ್ವರ ಸಂಕನೂರ, ಸುರೇಶ ಬಬಲಾದ, ಎಸ್.ಪಿ ಸುಳ್ಳದ್, ಶಂಕರ ಜಾನಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭವ್ಯವಾದ ಸಾಂಸ್ಕೃತಿಕ ಮೆರವಣಿಗೆ :
ದಲಿತ ಚಳುವಳಿ 4 ದಶಕಗಳ ಆಂದೋಲನದ ಅಂಗವಾಗಿ ಪುರಷರು ಮತ್ತು ಮಹಿಳೆಯರು ಶುಭ್ರವಾದ ಬಿಳಿ ಬಟ್ಟೆಗಳನ್ನು ಧರಿಸಿ ಕೈಯಲ್ಲಿ ನೀಲಿ ಮತ್ತು ಪಂಚಶೀಲ ಧ್ವಜಗಳನ್ನು ಹಿಡಿದು ಬೃಹತ್ ಭವ್ಯವಾದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ನೂರಾರು ಜನರು ಒಂದೇ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಳ್ಳುವುದು ಸಮುದಾಯದ ಒಗ್ಗಟ್ಟನ್ನು ಪ್ರದರ್ಶಿಸುತ್ತ ಭಾಗವಹಿಸಿದ್ದರು, ಕಲಾತಂಡಗಳು, ಶಹನಾಯಿ ವಾದನ, ಹಲಗೆ, ಡೊಳ್ಳು ಕುಣಿತ, ಲೇಜಿಮ್ ಹಾಕುತ್ತ ಮತ್ತು ಕ್ರಾಂತಿ ಗೀತೆಗಳ ಮೂಲಕ ಸಮಾಜದ ಕಣ್ಣು ತೆರೆಸುವ ಪ್ರಯತ್ನವಾಗಿತ್ತು.
ದಲಿತ ಕಲಾ ಮಂಡಳಿಯ ಅಂಬಣ್ಣ ಜೀವಣಗಿ ಮತ್ತು ರಘುನಾಥ ಜಾಯಿ ಸಂಗಡಿಗರಿಂದ ಕ್ರಾಂತಿ ಗೀತೆಗಳನ್ನು ಹಾಡಿದರು. ತಿಪ್ಪಣ್ಣ ಧನೇಕರ ಸ್ವಾಗತಿಸಿದರು, ಕೃಷ್ಣಪ್ಪ ಕರಣಿಕ ನಿರೂಪಿಸಿದರು, ಜೈ ಭೀಮ ವಂದಿಸಿದರು.
