ಶ್ರೀ ಸಿಮೆಂಟ್ ಕಂಪನಿಯ ಕಾಮಗಾರಿಯಿಂದ ರೈತರ ಬೆಳೆ ಹಾನಿ, ಕ್ರಮಕ್ಕೆ ಪ್ರಗತಿಪರ ರೈತರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಸ್ಟೇಷನ್ ಹತ್ತಿರದ ಶ್ರೀ ಸಿಮೆಂಟ್ ಕಂಪನಿಯ ರೈಲ್ವೆ ಕಾಮಗಾರಿಯಿಂದ ರೈತರ ಹೊಲಗಳಿಗೆ ಹಾನಿಯಾಗುತ್ತಿದ್ದು ಹಾಗೂ ಮೂಲ ರಸ್ತೆಯ ಸರ್ಕಾರಿ ಹಣಾದಿಗಳು ಒತ್ತುವರಿ ಮಾಡಿ ರೈಲ್ವೆ ಹಳಿ ಹಾಕಿ ರೈತರಿಗೆ ಆಚೆ ಹೋಗಿ ಬರಲು ರಸ್ತೆ ಕೊಡದೆ ಇರುವ ಕಾರಣ ತೊಂದರೆಯಾಗಿತ್ತಿದ್ದು, ಈ ಕಂಪನಿಯ ಕಾರ್ಯವನ್ನು ಕೂಡಲೇ ಸ್ಥಗಿತ ಮಾಡಬೇಕು ಹಾಗೂ ರೈತರಿಗೆ ಸೂಕ್ತ ಪರಿಹಾರವನ್ನು ಕೊಡಿಸುವಂತೆ ಆಗ್ರಹಿಸಿ ಬುಧವಾರ ಪ್ರಗತಿಪರ ರೈತರು ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಪ್ರಗತಿಪರ ರೈತ ರಮೇಶ್ ಬೊಮ್ಮನಳ್ಳಿ ಮಾತನಾಡಿ, ಶ್ರೀ ಸಿಮೆಂಟ್ ಕಂಪನಿಯವರು ಅವೈಜ್ಞಾನಿಕವಾಗಿ ಕಾರ್ಖಾನೆಯನ್ನು ನಡೆಸುತ್ತಿದ್ದು ಅದರಿಂದ ಬರುವ ದೂಳಿನಿಂದ ನಮ್ಮ ಬೆಳೆಗಳಾದ ಕಡಲೆ ಬೆಳೆ, ತೊಗರಿ ಬೆಳೆ ಮೇಲೆ ದುಷ್ಪರಿಣಾಮ ಬೀರಿ ಬೆಳೆಗಳು ಕುಂಟಿತಗೊಂಡು ಹೂ ಬಿಡುತ್ತಿರುವುದಿಲ್ಲ ಹಾಗೂ ಬೆಳವಣಿಗೆಯು ಆಗುತ್ತಿಲ್ಲ ಅದಕ್ಕಾಗಿ ಆ ಬೆಳೆಗಳಿಂದ ಯಾವುದೇ ಫಸಲನ್ನು ನಿರೀಕ್ಷಿಸುವಂತಿಲ್ಲ ಮತ್ತು ಇಳುವರಿ ಸಹ ಬರುತ್ತಿಲ್ಲಾ. ಈ ವರ್ಷ ಮಳೆ ಹೆಚ್ಚಾದ ಕಾರಣ ಇವರು ಈಗಾಗಲೇ ಕೊಟ್ಟ ಮಾತಿನಂತೆ ರಸ್ತೆಯ ಎರಡು ಬದಿಯಲ್ಲಿ ನಾಲೆಗಳನ್ನು ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದು, ಅದು ಇನ್ನೂ ಈಡೇರಿಸಿಲ್ಲ ಅದರಿಂದ ಮಳೆ ನೀರು ನಮ್ಮ ಹೊಲಗಳಲ್ಲಿ ನುಗ್ಗಿ ತುಂಬಾ ನಷ್ಟ ಅನುಭವಿಸುತ್ತಿದ್ದೇವೆ ಹಾಗೂ ಕಂಪನಿಯವರು ಈ ಮೊದಲು ನಾವು ಕೊಟ್ಟ ಮನವಿಗೆ ಸ್ಪಂದಿಸಿ ರಸ್ತೆ, ಮೂಲ ಹಾಣಾದಿಗಳಿಂದ ರೈಲ್ವೆ ಹಳಿಯ ಆಚೆಗೆ ಹೋಗಲು ರಸ್ತೆಯನ್ನು ಮಾಡಿಕೊಡುವುದಾಗಿ ಲಿಖಿತ ರೂಪದಲ್ಲಿ ಬರೆದು ಕೊಟ್ಟಿದ್ದು ಆ ಕೆಲಸವನ್ನು ಕೂಡ ಇನ್ನೂ ಮಾಡಿರುವುದಿಲ್ಲ. ಇವೆಲ್ಲ ಕಾರಣಗಳಿಂದ ನಾವು ಖರ್ಚು ಮಾಡಿದ ಎಲ್ಲಾ ಹಣವು ವ್ಯರ್ಥವಾಗಿದ್ದು ನಮ್ಮನ್ನು ಸಾಲದ ಸುಳಿಗೆ ಸಿಲುಕಿಸುವಂತೆ ಮಾಡಿದ್ದಾರೆ ಎಂದು ತಮ್ಮ ನೋವನ್ನು ಹೊರಹಾಕಿದರು.
ಆದರೆ ನಾವು ನಮ್ಮ ಸಾಲ ಭಾದೆಯಿಂದ ನಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಗುತ್ತದೆ ಹೀಗಾಗಿ ಈ ಕಂಪನಿಯ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಂಡು ಕೂಡಲೇ ಪರಿಹಾರವನ್ನು ದೊರಕಿಸಿ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತರಾದ ನಾಗರಾಜ ರೇಷ್ಮಿ, ಅನೀಲ್ ವಡ್ಡಡಗಿ, ನಾಗರಾಜ ಸುಲ್ತಾನಪೂರ್ ಸೇರಿದಂತೆ ಇತರರು ಇದ್ದರು.

