ಸುಂಠಾಣ ಮಠದಲ್ಲಿ ಕಾರ್ತಿಕ ದೀಪೋತ್ಸವ | ಕಾರ್ತಿಕ ಮಾಸದಲ್ಲಿ ದೀಪ ಹಚ್ಚಿದರೆ ಪುಣ್ಯ ಪ್ರಾಪ್ತಿ: ಚನ್ನರುದ್ರಮನಿ ಶಿವಾಚಾರ್ಯರು
ನಾಗಾವಿ ಎಕ್ಸಪ್ರೆಸ್
ಕಾಳಗಿ: ಕಾರ್ತಿಕ ಮಾಸದಲ್ಲಿ ಕೈಗೊಳ್ಳುವ ವ್ರತ, ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಅತ್ಯಂತ ಶ್ರೇಷ್ಠತೆಯಿಂದ ಕೂಡಿದ್ದು ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಕಾರ್ತಿಕ ಮಾಸದಲ್ಲಿ ನಿಯಮ ನಿಷ್ಠೆಯಿಂದ ಉಪವಾಸವಿದ್ದು ದೇವಸ್ಥಾನಕ್ಕೆ ಹೋಗಿ ದೀಪ ಹಚ್ಚಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಸೂಗುರ್ ಹಾಗೂ ಸುಂಠಾಣ ಶಾಖಾ ಮಠದ ಶ್ರೀ ಡಾ. ಚನ್ನರುದ್ರಮನಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಸುಂಠಾಣ ಗ್ರಾಮದ ಶಾಖಾ ಮಠದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾರ್ತಿಕ ಮಾಸ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ ಮಾಸ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೀಪಾರಾಧನೆ ಮಾಡಿದರೆ ಐಶ್ವರ್ಯ, ಸಂಪತ್ತು, ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಎಲ್ಲಾ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ ಎಂದು ಹೇಳಿದರು.
ಸಮಾಜ ಸೇವಕ ಕೇದಾರನಾಥ ಕುಲಕರ್ಣಿ, ಬಾಲವಿಜ್ಞಾನಿ ಅಜಿತ್ ಪಾಟೀಲ, ಸಂಗೀತ ಕಲಾವಿದ ಬಸವರಾಜ ದೇಶಾಮರ, ಉದ್ಯಮಿ ನಾಗರಾಜ ಪಾಟೀಲ್ ಹೂಳಗೇರಾ, ರೈತ ಮುಖಂಡ ವೀರಣ್ಣ ಗಂಗಾಣಿ, ಗ್ರಾಮದ ಮುಖಂಡರಾದ ಜೈ ಶಂಕರ ಪಾಟೀಲ್, ಸದಾಶಿವ ಪಾಟೀಲ್, ಕಾಶಿನಾಥ ಗೌಡ ಮಾಲಿ ಬಿರಾದಾರ, ಸೂರ್ಯಕಾಂತಿ ಇಟಗಿ, ಪ್ರೇಮ ಎಲ್ಮಡಗಿ, ಅಮಿತ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ರಾಜಶೇಖರ ಮಾಲಿ ಬಿರಾದಾರ ನಿರೂಪಿಸಿದರು.
ಹಾಸ್ಯ ಕಲಾವಿದ ಗುಂಡಣ್ಣ ಡಿಗಿ ಹರಸೂರ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಲಾವಣ್ಯ ಮೆಲೋಡಿಸ್ ತಂಡದ ರಾಜು ಹುಲಸಗೂಡ, ಸೌಜನ್ಯ ಹುಲಸಗೂಡ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

