ಚಿತ್ತಾಪುರ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಕೆಂಡಾಮಂಡಲ, ಮೂಕವಿಸ್ಮಿತರಾದ ಕಾಂಗ್ರೆಸ್ ಮುಖಂಡರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿ ಪ್ರಾರಂಭವಾಗುವ ಮೊದಲೇ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲೇ ಏಕಾಏಕಿ ಆಕ್ರೋಶದ ಮಾತುಗಳನ್ನು ಆಡಿ ಕಿಡಿ ಕಾರಿದ ಪ್ರಸಂಗ ನಡೆಯಿತು.
ಏನಾದರೂ ಇದ್ದರೆ ನನ್ನನ್ನು ನೇರವಾಗಿ ಹೇಳಿ ನನ್ನ ಎದುರಿಗೆ ಹೇಳಿ ಅದನ್ನು ಬಿಟ್ಟು ಸಚಿವರ ಎದುರು ಚಾಡಿ ಏಕೆ ಹೇಳಿದ್ದಿರಿ, ಚಾಡಿ ಹೇಳುವುದು ಬಿಟ್ಟು ನೇರವಾಗಿ ಮಾತಾಡಿ, ನಾನು ಬರುವತನಕ ಸುದ್ದಿಗೋಷ್ಠಿ ಮಾಡಬೇಡಿ ಅಂತ ಯಾವಾಗ ಹೇಳಿದ್ದೇನೆ ಮತ್ತು ಯಾರನ್ನು ನಾನು ಕಾಯಿಸಿದ್ದೇನೆ ಹೇಳಿ ನೋಡೋಣ ಎಂದು ಕೆಂಡಾಮಂಡಲಗೊಂಡು ಹಿಗ್ಗಾಮುಗ್ಗಾವಾಗಿ ತೀವ್ರ ತರಾಟೆಗೆ ತೆಗೆದುಕೊಂಡಾಗ ಉಪಸ್ಥಿತರಿದ್ದ ಕಾಂಗ್ರೆಸ್ ಮುಖಂಡರು ಮೂಕವಿಸ್ಮಿತರಾಗಿದ್ಜರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಅವರು ಮಾತ್ರ ಆಕ್ರೋಶಗೊಂಡ ನಾಗರೆಡ್ಡಿ ಪಾಟೀಲ ಕರದಾಳ ಅವರಿಗೆ ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು, ಈ ವೇಳೆ ಪಾರ್ಟಿಯಿಂದ ಕಿತ್ತು ಹಾಕೋದಾರೆ ಹಾಕಿ ಎಂದು ತಮ್ಮ ಆಕ್ರೋಶ ಹೊರಹಾಕಿದರು. ಈ ಕುರಿತು ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ ಅವರಿಗೆ ಪ್ರಶ್ನಿಸಿದಾಗ ಇದು ನಮ್ಮ ಪಕ್ಷದ ಆಂತರಿಕ ವಿಷಯ ನಾವು ಸರಿಪಡಿಸಿಕೊಳ್ಳುತ್ತೇವೆ ಎಂದು ಸಮಜಾಯಿಷಿ ನೀಡಿದರು.
ತಮ್ಮ ವಿರುದ್ಧ ಕಾಂಗ್ರೆಸ್ ಮುಖಂಡರ ಒಂದು ಗುಂಪು ಬೆಂಗಳೂರಿಗೆ ಹೋಗಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಚಾಡಿ ಹೇಳಿರುವುದಕ್ಕೆ ನಾಗರೆಡ್ಡಿ ಪಾಟೀಲ ಕರದಾಳ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ ಭೀಣ್ಣಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ತಾರ್ ಪಟೇಲ್, ಪುರಸಭೆ ಸದಸ್ಯೆ ಶೀಲಾ ಕಾಶಿ, ರವೀಂದ್ರ ರೆಡ್ಡಿ, ಸಿದ್ದಣ್ಣಗೌಡ ಪಾಟೀಲ ದಿಗ್ಗಾಂವ, ಉದಯಕುಮಾರ್ ಸಾಗರ ಸೇರಿದಂತೆ ಇತರರು ಇದ್ದರು.

