ಪ್ರವಾಹ ಪೀಡಿತ ಕಡಬೂರ ಗ್ರಾಮಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ, ಪರೀಶೀಲನೆ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರವಾಹ ಪೀಡಿತ ತಾಲೂಕಿನ ಕಡಬೂರ ಗ್ರಾಮಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಎನ್ ಡಿ ಆರ್ ಎಫ್ ತಂಡದೊಂದಿಗೆ ರಬ್ಬರ್ ಬೋಟ್ ನಲ್ಲಿ ತೆರಳಿದ ಸಚಿವರು, ಭೀಮಾ‌ ನದಿಯ ಹಿನ್ನೀರಿನಲ್ಲಿ ಹಾನಿಗೊಳಗಾದ ಮನೆ ಹಾಗೂ ಪ್ರದೇಶವನ್ನು ವೀಕ್ಷಿಸಿದರು.

ಕಡಬೂರಿನಲ್ಲಿ ಹಾನಿಗೊಳಗಾದ 186 ಕುಟುಂಬಗಳಿಂದ ಅಂದಾಜು 300 ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ತಾತ್ಕಾಲಿಕ‌ ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರಿಗೆ ವಸತಿ ವ್ಯವಸ್ಥೆ ಜೊತೆಗೆ ಊಟ ಹಾಗೂ ಇತರೆ ಸೌಲಭ್ಯ ಒದಗಿಸಲಾಗಿದೆ.

ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಭೀಮಾ ಹಾಗೂ ಕಾಗಿಣ ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ‌ ಉಂಟಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರಸಿಂಗ್ ಮೀನಾ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ಎಎಸ್ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಶಿವಾನಂದ ಪಾಟೀಲ, ತಹಸೀಲ್ದಾರ್ ನಾಗಯ್ಯ ಹಿರೇಮಠ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಂ ಪಾಷಾ, ಮಹೀಮೂದ್ ಸಾಹೇಬ್, ಶಿವರುದ್ರಪ್ಪ ಬೀಣ್ಣಿ, ಜಗಣ್ಣಗೌಡ ರಾಮತೀರ್ಥ, ಮಲ್ಲಿಕಾರ್ಜುನ ಕಾಳಗಿ, ಸಂಜಯ ಬುಳಕರ್, ಶರಣು ಡೋಣಗಾಂವ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!