ಅಯ್ಯನ ಕಥೆಗಳು ಕೃತಿ ವಿತರಣಾ ಅಭಿಯಾನ | ಬದುಕು ರೂಪಿಸುವ ನೀತಿ ಕಥೆ ಓದುವುದು ಅಗತ್ಯ: ಎಸ್ ಪಿ ಸುಳ್ಳದ್
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಬದುಕು ರೂಪಿಸಲು ನೀತಿ ಕಥೆಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಮಾನವೀಯ ಮೌಲ್ಯ ಮತ್ತು ನೈತಿಕ ಬದುಕಿಗೆ ಪ್ರೇರಣೆ ನೀಡುವ ಕೃತಿಗಳನ್ನು ಓದುವುದು ಅತ್ಯಂತ ಅಗತ್ಯ ಎಂದು ಸಾಹಿತಿ ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಸ್.ಪಿ ಸುಳ್ಳದ್ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಎಂ.ಪಿ.ಎಚ್.ಎಸ್) ನಲ್ಲಿ ಸೋಮವಾರ ನಡೆದ ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಟ್ರಸ್ಟ್ ನ ಪುಸ್ತಕ ವಿತರಣಾ ಅಭಿಯಾನ- 2 ಕಾರ್ಯಕ್ರಮದಲ್ಲಿ ಹೈದರಾಬಾದ್ ಸಂಸ್ಥಾನ ವಿಮೋಚನಾ ಹೋರಾಟಗಾರ ಹಾಗೂ ಸಾಹಿತಿ ಮಹಾದೇವಪ್ಪ ಕಡೇಚೂರ್ ಕೃತಿಗಳನ್ನು ಎಂಪಿ ಎಚ್ ಎಸ್ ಶಿಕ್ಷಣ ಸಂಸ್ಥೆಗೆ ಹಸ್ತಾಂತರಿಸಿದ ನಂತರ ಮಾತನಾಡಿ, ವಿದ್ಯಾರ್ಥಿಗಳಿಗೆ ನೀತಿ ಬೋಧನೆಯ ಕಡೇಚೂರ್ ಅವರ ಕೃತಿಯನ್ನು ಹಂಚಿಕೆ ಮಾಡುವ ಕಾರ್ಯಕ್ರಮವು ಅತ್ಯಂತ ಶ್ಲಾಘನೀಯವಾದದ್ದು. ದೇಶ ಸುತ್ತು ಕೋಶ ಓದು ಎಂಬ ಮಾತಿನಂತೆ ಸಂಸ್ಕಾರ, ಪರಂಪರೆ ತಿಳಿಯಲು ಇಂತಹ ಕೃತಿ ಅತ್ಯಂತ ಮೌಲಿಕವಾದದ್ದು ಎಂದು ಹೇಳಿದರು.
ಅಂಬೇಡ್ಕರ್ ರಂಥವರು ಪುಸ್ತಕ ಓದಿನಿಂದಲೇ ತಮ್ಮ ಬದುಕನ್ನು ರೂಪಿಸಿದ್ದಾರೆ. ಅಜ್ಜಿ ಕಥೆ ಗೋವಿನ ಹಾಡು ಕೇಳಿದ ಹಿರಿಯರು ಆದರ್ಶದ ಬದುಕು ಕಟ್ಟಿಕೊಂಡಂತೆ ಈಗಿನ ವಿದ್ಯಾರ್ಥಿಗಳು ಕಡೆಚೂರು ಅವರ ನೀತಿ ಬೋಧಕ ಕಥೆಗಳನ್ನು ಓದಿ ಬದುಕು ಕಟ್ಟಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಹಿತಿ ಡಾ. ಚಿ.ಸಿ ನಿಂಗಣ್ಣ ಮಾತನಾಡಿ, ಹಿಂದೆ ಓದಲು ಪುಸ್ತಕಗಳ ಕೊರತೆಯಿತ್ತು. ಆದರೆ ಓದುವವರ ಸಂಖ್ಯೆ ಹೆಚ್ಚಿತ್ತು. ಆದರೆ ಈಗ ಓದಲು ತುಂಬಾ ಪುಸ್ತಕಗಳಿದ್ದರೂ ದುರದೃಷ್ಟಕರ ಎಂಬಂತೆ ಓದುವವರ ಸಂಖ್ಯೆ ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಲ ಬದಲಾಗಿದ್ದು ಅಯ್ಯನ ಕಥೆಗಳು ಕೃತಿಯು ದೇಶಭಕ್ತಿ, ಕುಟುಂಬ ಪ್ರೀತಿ ವಿನೋದ ಪ್ರಾಮಾಣಿಕತೆ ಮುಂತಾದ ಪ್ರಸಂಗಗಳ ಕೃತಿಯಾಗಿದ್ದು ಜ್ಞಾನಗಳಿಕೆಯೊಂದಿಗೆ ಸೃಜನಶೀಲ, ಕ್ರಿಯಾತ್ಮಕ ಬದುಕು ಕಟ್ಟಿಕೊಳ್ಳಲು ಪ್ರೇರಣೆ ನೀಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಂಪಿಎಚ್ ಎಸ್ ನ ಪ್ರಾಚಾರ್ಯರಾದ ದೇವಿದಾಸ್ ಬಿ. ಪವಾರ್ ಮಾತನಾಡಿ, ಅಯ್ಯನ ಕಥೆಗಳು ವಿದ್ಯಾರ್ಥಿಗಳಿಗೆ ಉಪಯುಕ್ತ ಪುಸ್ತಕವಾಗಿದ್ದು ಒಂದು ವಾರದ ಅವಧಿಗೆ ಓದಿ ಮುಗಿಸಬಹುದಾದ ಈ ಕೃತಿಯು ನಮ್ಮ ನೆಲದ ಭಾಷೆಯ ಜೊತೆಗೆ ಅನುಭವ ಜನ್ಯ ಕಥೆಗಳ ಸಂಕಲನವಾಗಿದೆ. ಪುಸ್ತಕಗಳು ಬಲುದೊಡ್ಡ ಆಸ್ತಿಯಾಗಿದ್ದು ಸ್ವಾತಂತ್ರ್ಯ ಹೋರಾಟಗಾರ ಕಡೇಚೂರ್ ಅವರಿಂದ ರಚಿತ ಈ ಕೃತಿ ಓದುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಟ್ರಸ್ಟಿನ ಸದಸ್ಯರಾದ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕ ಭಾಷಣ ಮಾಡಿದರು. ಹಿರಿಯ ಆಂಗ್ಲ ಉಪನ್ಯಾಸಕಿ ಸಂಗೀತಾ ಕಪೂರ್, ಶಿಕ್ಷಕರಾದ ನೀಲಾಂಬಿಕಾ ಪಾಟೀಲ್, ಜ್ಯೋತಿ ಹೊಸೂರು, ಸವಿತಾ ನಾಟಿಕರ್, ಉಪಸ್ಥಿತರಿದ್ದರು. ಕು.ಅರ್ಪಿತಾ ಪ್ರಾರ್ಥನಾ ಗೀತೆ ಹಾಡಿದರು, ಉಪನ್ಯಾಸಕ ಮಾರುತಿ ಬೇಂದ್ರೆ ನಿರೂಪಿಸಿದರು, ಸಂತೋಷ ಹೊಸಮನಿ ವಂದಿಸಿದರು.

