ಚಿತ್ತಾಪುರ ರಾತ್ರೋರಾತ್ರಿ ಕೇಸರಿ ಧ್ವಜ ತೆರವುಗೊಳಿಸಿದ ಪುರಸಭೆ ಆಡಳಿತ | ದಿಕ್ಕಾರ ಕೂಗಿದ ಬಿಜೆಪಿ ಮುಖಂಡರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಸಂಘ ಶತಾಬ್ದಿ ವರ್ಷ ಹಾಗೂ ವಿಜಯದಶಮಿ ಉತ್ಸವ ನಿಮಿತ್ತ ಅ. 19 ಮಧ್ಯಾಹ್ನ 3 ಗಂಟೆಗೆ ಬಜಾಜ್ ಕಲ್ಯಾಣ ಮಂಟಪದ ಆವರಣದಿಂದ ಪಥ ಸಂಚಲನ ಪ್ರಯುಕ್ತ ಅ.16 ರಿಂದಲೇ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಕಲಾಗಿದ್ದ ಕೇಸರಿ, ಪರಾರಿ, ಬಂಟಿಂಗ್ಸ್, ಬ್ಯಾನರ್, ಭಗವಾಧ್ವಜಗಳನ್ನು ಅ.17 ರಂದು ರಾತ್ರಿ ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ಸ್ಥಳದಲ್ಲಿದ್ದ ಆರ್.ಎಸ್.ಎಸ್ ಹಾಗೂ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ತಾಲೂಕು ಆಡಳಿತಕ್ಕೆ ದಿಕ್ಕಾರ ಹಾಕಿದರೂ ಸಹ ಅಧಿಕಾರಿಗಳು ಮಾತ್ರ ಎಲ್ಲವೂ ತೆರವುಗೊಳಿಸಿದರು. ಇದರಿಂದ ನಾಳೆ ಚಿತ್ತಾಪುರ ಪಟ್ಟಣದಲ್ಲಿ ನಡೆಯಲಿರುವ ಆರ್ ಎಸ್ ಎಸ್ ಪಥ ಸಂಚಲನಕ್ಕೆ ವಿಘ್ನ ಉಂಟಾಗಿದೆ.
ಪಥ ಸಂಚಲನ ಕಾರ್ಯಕ್ರಮದ ನಿಮಿತ್ತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಧ್ವಜ, ಬ್ಯಾನರ್ ಕಟ್ಟಲು ಸ್ಥಳೀಯ ಪುರಸಭೆಗೆ ಅನುಮತಿಗಾಗಿ ಶುಲ್ಕ ಪಾವತಿ ಮಾಡಿದ್ದರೂ ಸಹ ಅಧಿಕಾರಿಗಳು ಮಾತ್ರ ರಾತ್ರೋರಾತ್ರಿ ಎಲ್ಲವೂ ತೆರವುಗೊಳಿಸಿದರುವುದಕ್ಕೆ ಆರ್.ಎಸ್.ಎಸ್ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೇಲ್ಲಾ ಬೆಳವಣಿಗೆ ನಡುವೆ ನಾಳೆ ಚಿತ್ತಾಪುರ ಪಟ್ಟಣದಲ್ಲಿ ಪಥ ಸಂಚಲನ ನಡೆಯಲಿದೆಯೇ ಎನ್ನುವ ಅನುಮಾನ ಸಾರ್ವಜನಿಕರ ವಲಯದಲ್ಲಿ ಮೂಡಿದೆ.

