ದಂಡೋತಿ ಗ್ರಾಮದಲ್ಲಿ ಮಳೆಗೆ ಕುಸಿದ ಮನೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ, ಪರಿಹಾರಕ್ಕೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟು ಜನಜೀವನ ಅಸ್ತವ್ಯಸ್ತಗೊಂಡಿದೆ, ಅಲ್ಲಲ್ಲಿ ಮನೆಗಳು ಬಿದ್ದು ಆಸ್ತಿ ಪಾಸ್ತಿ ಹಾನಿಯಾದ ವರದಿಯಾಗಿದೆ.
ದಂಡೋತಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಎಂ.ಡಿ ರಫೀಕ ರಸೂಲ್ ಸಾಬ್ ಡೊಂಗಾ ಮತ್ತು ಪುತಲಿಬೇಗಂ ಹುಸೇನ್ ಸಾಬ್ ಡೊಂಗಾ ಅವರ ವಾಸದ ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಆದರೆ ಗೃಹಪಯೋಗಿ ವಸ್ತುಗಳು, ತೊಗರಿ, ಜೋಳಾ ಸೇರಿದಂತೆ ಇತರೆ ಆಹಾರ ಧಾನ್ಯಗಳು, ಕೂಲರ್, ಫ್ರೀಜ್, ಟಿವಿ ಸೇರಿದಂತೆ ಇತರೆ ಸಾಮಾನುಗಳು ಕಟ್ಟಡದ ಅವಶೇಷಗಳಡಿ ಸಿಲುಕಿದ್ದು ಅಂದಾಜು 3 ಲಕ್ಷ ಮೌಲ್ಯದ ಆಸ್ತಿ ಪಾಸ್ತಿ ಹಾನಿಯಾಗಿದೆ ಎಂದು ಎಂ.ಡಿ ರಫೀಕ ರಸೂಲ್ ಸಾಬ್ ಡೊಂಗಾ ತಿಳಿಸಿದ್ದಾರೆ.
ಇಲ್ಲಿವರೆಗೆ ಕೇವಲ ಗ್ರಾಮ ಲೆಕ್ಕಾಧಿಕಾರಿ ಮಾತ್ರ ಭೇಟಿ ನೀಡಿದ್ದಾರೆ ಆದರೆ ಯಾವೊಬ್ಬ ಅಧಿಕಾರಿಗಳು ಭೇಟಿ ನೀಡಿಲ್ಲ, ಹೀಗಾಗಿ ಹಾನಿಯಾದ ಬಗ್ಗೆ ಖುದ್ದಾಗಿ ಪರೀಶೀಲನೆ ನಡೆಸಿ ಸಮಗ್ರ ವರದಿ ಪಡೆದು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
“ದಂಡೋತಿ ಗ್ರಾಮದಲ್ಲಿ ನಿರಂತರ ಮಳೆಗೆ ಎರಡು ಕುಟುಂಬಗಳ ದೊಡ್ಡದಾದ ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ ಇದರಿಂದ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ಮಾಡಿ ಸರ್ಕಾರದಿಂದ ಸಿಗುವ ಪರಿಹಾರ ಒದಗಿಸಬೇಕು”.ಮೈನೋದ್ದಿನ್ ಕರವೇ ಅಧ್ಯಕ್ಷರು ದಂಡೋತಿ.
