ಸೆ.16 ರಂದು ನಾರಾಯಣ ಗುರು ಜಯಂತಿಗೆ ಚಿತ್ರನಟ ವಿಜಯ ರಾಘವೇಂದ್ರ ಮೆರುಗು | ಬ್ರಹ್ಮಶ್ರೀ ನಾರಾಯಣಗುರು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ, ಉಚಿತ ಆರೋಗ್ಯ ತಪಾಸಣೆ, 11 ವಿದ್ಯಾರ್ಥಿಗಳ ದತ್ತು ಸ್ವೀಕಾರ: ಗುತ್ತೇದಾರ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಉತ್ಸವವನ್ನು ಸೆಪ್ಟೆಂಬರ್ 16ರಂದು ಮಂಗಳವಾರ ಡಾ. ಎಸ್.ಎಂ ಪಂಡಿತ್ ರಂಗ ಮಂದಿರದಲ್ಲಿ ಸಂಭ್ರಮದಿಂದ ಏರ್ಪಡಿಸಲಾಗಿದ್ದು ಖ್ಯಾತ ಚಲನಚಿತ್ರ ನಟ ವಿಜಯ್ ರಾಘವೇಂದ್ರ ವಿಶೇಷ ಅತಿಯಾಗಿ ಭಾಗವಹಿಸಲಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯ ಆಚರಣೆಯ ಕಲಬುರಗಿ ಅಧ್ಯಕ್ಷ ಡಾ. ವಿನಯ್ ಗುತ್ತೇದಾರ ಗಾರಂಪಳ್ಳಿ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಈ ಬಾರಿಯ ಜಯಂತಿ ಉತ್ಸವ ಅತ್ಯಂತ ಅರ್ಥಪೂರ್ಣವಾಗಿ ಡೆಯಲಿದ್ದು ಚಲನಚಿತ್ರ ನಟ ವಿಜಯ್ ರಾಘವೇಂದ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದು ಜೊತೆಗೆ ಹಿರಿಯ ನಾಯಕರಾದ ಬಿ.ಕೆ ಹರಿಪ್ರಸಾದ್, ಕೋಟ ಶ್ರೀನಿವಾಸ ಪೂಜಾರಿ, ಪ್ರಿಯಾಂಕ ಖರ್ಗೆ, ಡಾ.ಶರಣಪ್ರಕಾಶ್ ಪಾಟೀಲ್, ಶರಣಬಸವಪ್ಪ ದರ್ಶನಾಪುರ್, ಜಗದೇವ ಗುತ್ತೇದಾರ್, ಡಾ. ಅಜಯ್ ಸಿಂಗ್, ಮಾಲಿಕಯ್ಯ ವಿ ಗುತ್ತೇದಾರ್, ಸುಭಾಷ್ ಆರ್ ಗುತ್ತೇದಾರ್, ಕಲಬುರಗಿ ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷ ರಾಜೇಶ್ ಜಗದೇವ ಗುತ್ತೇದಾರ್, ಲೋಕಸಭಾ ಸದಸ್ಯರು, ಶಾಸಕರು ವಿಧಾನ ಪರಿಷತ್, ಮೇಯರ್ ಉಪ ಮೇಯರ್ ಹಾಗೂ ತಾಲೂಕುಗಳ ಆರ್ಯ ಈಡಿಗ ಸಮಿತಿಯ ಸದಸ್ಯರು ಸೇರಿದಂತೆ ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ವಿವಿಧ ಮಠಾಧೀಶರ ಆಗಮನ:
ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಸಮಾಜದ ಗುರುಗಳಾದ ಡಾ. ಪ್ರಣವಾನಂದ ಸ್ವಾಮೀಜಿಗಳೊಂದಿಗೆ ಶರಣಬಸವೇಶ್ವರ ಸಂಸ್ಥಾನ ಮಠದ ಒಂಬತ್ತನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ, ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ದಾಕ್ಷಾಯಿಣಿ ಅಪ್ಪ, ಕಟ್ಟಿಮನಿ ಹಿರೇಮಠದ ಗುರುಮೂರ್ತಿ ಶಿವಾಚಾರ್ಯರು, ಚಿತ್ರದುರ್ಗ ಕುಂಬಾರ ಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ತೋನಸನಹಳ್ಳಿ ಅಲ್ಲಮ ಪ್ರಭು ಸಂಸ್ಥಾನದ ಮಲ್ಲಣ್ಣಪ್ಪ ಮಹಾಸ್ವಾಮಿಗಳು, ಸುಲೇಪೇಟೆ ವಿಶ್ವಕರ್ಮ ಏಕದಂಡಗಿ ಮಠದ ದೊಡ್ಡೇಂದ್ರ ಮಹಾಸ್ವಾಮಿಗಳು ಆಗಮಿಸಲಿದ್ದಾರೆ.
ನಾರಾಯಣ ಗುರುಗಳ ಮೂರ್ತಿ, ಕೃತಿ ಅನಾವರಣ:
ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಉತ್ಸವದ ಸ್ಮರಣೆಗಾಗಿ ಖ್ಯಾತ ಶಿಲ್ಪ ಕಲಾವಿದರಾದ ಕುಂದಾಪುರದ ಕೃಷ್ಣ ನಾಯಕ್ ನಿರ್ಮಾಣ ಮಾಡಿದ ಐದು ಅಡಿ ಎತ್ತರದ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನ ಮೂರ್ತಿಯನ್ನು ಸರ್ದಾರ್ ವಲ್ಲಭ ಭಾಯಿ ಪಟೇಲ್ ವೃತ್ತದಿಂದ ಶೋಭಾ ಯಾತ್ರೆಯಲ್ಲಿ ರಂಗಮಂದಿರಕ್ಕೆ ತಂದು ವೇದಿಕೆಯಲ್ಲಿ ಅನಾವರಣಗೊಳಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಬಗ್ಗೆ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ. ಸದಾನಂದ ಪೆರ್ಲ ಬರೆದ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯಿಂದ ಹೊರ ತಂದ ” ನಾರಾಯಣ ಗುರು ” ಕೃತಿಯನ್ನು ಬಿಡುಗಡೆಗೊಳಿಸುವ ಕಾರ್ಯಕ್ರಮವಿದೆ. ನಾಡಗೀತೆ ಹಾಗೂ ನಾರಾಯಣ ಗುರುಗಳ ಕುರಿತ ಹಾಡುಗಳನ್ನು ಖ್ಯಾತ ಸಂಗೀತ ಕಲಾವಿದರಾದ ಬಸಯ್ಯ ಗುತ್ತೇದಾರ ತೆಲ್ಲೂರ ಪ್ರಸ್ತುತ ಪಡಿಸಲಿದ್ದಾರೆ.
11 ವಿದ್ಯಾರ್ಥಿಗಳ ದತ್ತು ಸ್ವೀಕಾರ:
ಕಲಬುರಗಿ ಜಿಲ್ಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ 11 ಮಂದಿ ವಿದ್ಯಾರ್ಥಿಗಳನ್ನು ಈಗಾಗಲೇ ಗುರುತಿಸಲಾಗಿದ್ದು ಸಮಾಜದ ದಾನಿಗಳು ಅವರನ್ನು ಮೂರು ವರ್ಷಗಳ ಕಾಲ ಶೈಕ್ಷಣಿಕ ಜವಾಬ್ದಾರಿಯನ್ನು ವೈಸುವ ವಿಶೇಷ ದತ್ತು ಸ್ವೀಕಾರ ಸಮಾರಂಭ ಕೂಡ ನಡೆಯಲಿದೆ. ಜಿಲ್ಲೆ ಎಂಟು ತಾಲೂಕುಗಳಿಂದ ವಿದ್ಯಾರ್ಥಿಗಳನ್ನು ಈಗಾಗಲೇ ಜಯಂತಿ ಉತ್ಸವ ಸಮಿತಿಯು ಆಯ್ಕೆ ಮಾಡಿದೆ ಎಂದು ಡಾ. ವಿನಯ್ ಗುತ್ತೇದಾರ ಮಾಹಿತಿ ನೀಡಿದರು.
18 ಸಾಧಕರಿಗೆ ಬ್ರಹ್ಮಶ್ರೀ ನಾರಾಯಣಗುರು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ:
ಒಂದೇ ಜಾತಿ , ಒಂದೇ ಮತ, ಒಬ್ಬನೇ ದೇವರು ಎಂದು ವಿಶ್ವ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಅನುಷ್ಠಾನಕ್ಕಾಗಿ ಬೇರೆಬೇರೆ ಜಾತಿ ಸಮುದಾಯದಲ್ಲಿ ಗುರುತಿಸಿಕೊಂಡ ವಿಶೇಷ ಸಾಧಕರನ್ನು ಈ ಬಾರಿ ಸನ್ಮಾನಕ್ಕೆ ಆಯ್ಕೆ ಮಾಡಲಾಗಿದ್ದು, 18 ಮಂದಿಗೆ ಬ್ರಹ್ಮಶ್ರೀ ನಾರಾಯಣಗುರು ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಕೇರಳದ ಖ್ಯಾತ ಸಮಾಜ ಸೇವಕಿ ಅಮೀನಾ ಮುಸ್ತಾಫಾ ಕಲ್ಲಿಕೋಟೆ ಹಾಗೂ ಶಾಸ್ತ್ರೀಯ ನೃತ್ಯ ಕಲಾವಿದೆ ಹನೀನಾ ಫಾತಿಮಾ ಮಲಪ್ಪುರಂ ಅವರಿಗೂ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ:
ಜಯಂತಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಈ ಬಾರಿ ನಗರದ ಜೀವಾ ಆಸ್ಪತ್ರೆಯ ಸಹಯೋಗದಲ್ಲಿ ಡಾ.ಸುಶೀಲ್ ಗುತ್ತೇದಾರ ಮತ್ತು ಡಾ. ಅಜಯ್ ಗುತ್ತೇದಾರ ನೇತೃತ್ವದಲ್ಲಿ ಬೆಳಗ್ಗೆ 9.30 ರಿಂದ ಸಾಯಂಕಾಲದ ತನಕ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಎಲುಗು ಮತ್ತು ಕೀಲು, ಚರ್ಮ, ಹೃದಯ ಹಾಗೂ ಇತರ ದೈಹಿಕ ಸಂಬಂಧಿತ ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆಯುವಂತೆ ಡಾ. ವಿನಯ ಗುತ್ತೇದಾರ ಮನವಿ ಮಾಡಿದ್ದಾರೆ.
ಸಾಂಸ್ಕೃತಿಕ ವೈಭವದ ಶೋಭಾ ಯಾತ್ರೆ:
ನಾರಾಯಣ ಗುರುಗಳ ಜಯಂತಿ ಉತ್ಸವದ ಪ್ರಯುಕ್ತ ಜಮುನಾ ಅಶೋಕ್ ಗುತ್ತೇದಾರ, ಶೋಭಾ ಆನಂದ ಗುತ್ತೇದಾರ, ಜ್ಯೋತಿ ರಾಜು ಗುತ್ತೇದಾರ, ಮೀನಾಕ್ಷಿ ಅಂಬಯ್ಯ ಗುತ್ತೇದಾರ ನೇತೃತ್ವದಲ್ಲಿ ಮೆರವಣಿಗೆ ಪೂಜೆಯು ನಡೆದು ಬೆಳಿಗ್ಗೆ 9.30 ಕ್ಕೆ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಡಿಜೆ ಬಳಸದೆ ಸಾಂಸ್ಕೃತಿಕ ವೈಭವದ ಶೋಭಾ ಯಾತ್ರೆ ನಡೆಯಲಿದೆ. ಕಲಶ ಹೊತ್ತ ನೂರೊಂದು ಮುತ್ತೈದೆಯರು, ಡೊಳ್ಳು ಮೇಳ, ಭಜನಾ ತಂಡ, ಲೇಜಿಮ್ ಮೇಳದೊಂದಿಗೆ ಶೋಭಾಯಾತ್ರೆ ಸಾಗಲಿದೆ. ನಟ ವಿಜಯ್ ರಾಘವೇಂದ್ರ ಅವರು ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಪಟೇಲ್ ವೃತ್ತದಿಂದ ಕೆಬಿಎನ್, ಸಿದ್ದಿಪಾಶ ಜಯದೇವ ಆಸ್ಪತ್ರೆ ಮಾರ್ಗದಲ್ಲಿ ರಂಗಮಂದಿರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.

