ರೈತರಿಗೆ ಮಧ್ಯಂತರ ಬೆಳೆ ವಿಮೆ ಹಣ ನೀಡುವಂತೆ ಹಾಗೂ ಎಕರೆಗೆ 25 ಸಾವಿರ ಹೆಚ್ಚುವರಿ ಪರಿಹಾರ ಹಣ ಬಿಡುಗಡೆಗೆ: ಸಿರಗಾಪೂರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ನೆಟೆ ರೋಗ ಉಂಟಾಗಿ ಭಾರಿ ಪ್ರಮಾಣದಲ್ಲಿ ತೊಗರಿ ಬೆಳೆ ನಷ್ಟ ಉಂಟಾಗಿದ್ದು, ರೈತರ ಖಾತೆಗೆ ಕೂಡಲೇ ಮಧ್ಯಂತರ ಬೆಳೆ ವಿಮೆ ಹಣ ನೀಡುವಂತೆ ವಿಮೆ ಕಂಪನಿಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸೂಚನೆ ನೀಡಬೇಕು ಮತ್ತು ರಾಜ್ಯ ಸರ್ಕಾರ ಎಕರೆಗೆ 25 ಸಾವಿರ ಹೆಚ್ಚುವರಿ ಪರಿಹಾರ ಹಣ ಬಿಡುಗಡೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮುಂಗಾರು ಮಳೆ ಕೈಕೊಟ್ಟು ಮುಂಗಾರು ಬೆಳೆಗಳು ರೈತರ ಕೈಗೇಟುಕದೆ ತೊಂದರೆ ಉಂಟಾಗಿದೆ. ತಡ ಮಾಡಿ ಬಂದ ಮಳೆ ಅತಿವೃಷ್ಟಿ ಸೃಷ್ಟಿಸಿತು, ಹೀಗಾಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೊಗರಿ ನೆಟೆ ರೋಗದಿಂದ ಒಣಗಲಾರಂಭಿಸಿವೆ. ತೊಗರಿ ಹಾಳಾಗಿ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರುತ್ತಿಲ್ಲ. ರೈತರು ಬಿತ್ತನೆ ಬೀಜ ಮತ್ತು ಗೊಬ್ಬರ ಸೇರಿದಂತೆ ಎಕರೆಗೆ 20 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಖರ್ಚು ಮಾಡಿದಷ್ಟು ಹಣ ಕೈಸೇರದೆ ತೊಂದರೆ ಅನುಭವಿಸುವಂತಾಗಿದೆ. ರೈತರು ತಮ್ಮ ಜೀವನ ಸಾಗಿಸುವುದು ದುಸ್ತರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಕ್ಟೇರ್ ಗೆ ಕೇವಲ 17 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ. ಈ ಹಣ ಎನೇನೂ ಸಾಲದೆ ರೈತರು ಸಾಲದಲ್ಲಿ ಮುಳುಗಿ ಸಂಕಷ್ಟ ಎದುರಿಸುವಂತಾಗಿದೆ. ಸಾಲ ಭಾದೆ ತಾಳಲಾರದೆ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರೈತರು ವಿಮಾ ಕಂಪನಿಗೆ ಬೆಳೆ ವಿಮೆ ಹಣ ಕಟ್ಟಿ 8 ತಿಂಗಳು ಕಳೆದರೂ ವಿಮಾ ಕಂಪನಿಗಳು ಬೆಳೆ ವಿಮೆ ಹಣವನ್ನು ಬಿಡುಗಡೆ ಮಾಡಿಲ್ಲ. ಇದರಿಂದ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಮಧ್ಯಂತರ ವಿಮೆ ಹಣ ಬಿಡುಗಡೆಗೆ ಕಲಬುರಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು ಆದರೆ ಅದು ಈಡೇರಿಲ್ಲ, ಹಣ ನೀಡದ ವಿಮಾ ಕಂಪನಿಗಳ ವಿರುದ್ಧ ಕ್ರಮ ಜರುಗಿಸಬೇಕು, ಕೂಡಲೇ ಮುಖ್ಯಮಂತ್ರಿಗಳು ರೈತರ ಪರ ಕಾಳಜಿ ಇದ್ದರೆ ಕೂಡಲೇ ಪರಿಹಾರ ಹಣ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ತೊಗರಿ ಖರೀದಿ ಕೇಂದ್ರಗಳು ಆರಂಭಗೊಂಡರು ಮಂದಗತಿಯಲ್ಲಿ ರೈತರಿಂದ ತೊಗರಿ ಖರೀದಿ ಮಾಡಲಾಗುತ್ತಿದೆ. ಇದರಿಂದ ರೈತರ ತೊಗರಿ ಖರೀದಿಗೆ ವಿಳಂಬವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

