ಸಾಂಸ್ಕೃತಿಕ ಸೌರಭ ಕಾರ್ಯಕ್ರಮ | ಉತ್ತಮ ಗಾಯಕರಾಗಲು ನಿರಂತರ ಅಭ್ಯಾಸ ಮಾಡಿ: ಧರ್ಮರಾಜ ಹೇರೂರು
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಉತ್ತಮ ಗಾಯಕರಾಗಲು ನಿರಂತರ ಅಭ್ಯಾಸ ಮಾಡಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಧರ್ಮರಾಜ ಹೇರೂರು ಹೇಳಿದರು.
ನಗರದ ಬಿದ್ದಾಪುರ ಕಾಲೋನಿಯ ಅಂಬಾಭವಾನಿ ದೇವಸ್ಥಾನದಲ್ಲಿ ವಿಜಯ ಸಾಂಸ್ಕೃತಿಕ ಕಲಾವಿದರ ಸಂಘ ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವರಶುದ್ಧತೆ, ತಾಳಜ್ಞಾನ ಮತ್ತು ಸಂಗೀತದ ಬಗ್ಗೆ ಆಸಕ್ತಿ ಅಗತ್ಯವಾಗಿದೆ ಎಂದರು.
ಗಾಯನವು ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಂಗೀತದ ಮೂಲಕ ಜನರಲ್ಲಿ ಪ್ರೀತಿ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಹರಡಬಹುದು. ಆದ್ದರಿಂದ ಸಂಗೀತ ಗಾಯನವು ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕೂ ಹಾಗೂ ಸಮಾಜದ ಸಾಂಸ್ಕೃತಿಕ ಬೆಳವಣಿಗೆಗೂ ಮಹತ್ವದ ಕೊಡುಗೆ ನೀಡುತ್ತದೆ ಎಂದು ಹೇಳಿದರು.
ಉದ್ಘಾಟನೆಯನ್ನು ರಾಜು ದೇವಮರ್ಗ ಅವರು ನೆರವೇರಿಸಿದರು, ಅಧ್ಯಕ್ಷತೆಯನ್ನು ಭೀಮಾಶಂಕರ ಮುಗಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಗಣ್ಣ ಪಾಟೀಲ್, ಡಾ. ಲಿಂಗರಾಜ ಹಿರೇಮಠ, ಸೋಮಶೇಖರ ಸಜ್ಜನ್ ಕಾರ್ಯಕ್ರಮ ಕುರಿತು ಮಾತನಾಡಿದರು.
ಮಲ್ಲಿಕಾರ್ಜುನ ರೋಣದ ಕಾರ್ಯಕ್ರಮ ನಿರೂಪಿಸಿದರು, ಚೇತನ ಬಿ ಸ್ವಾಗತಿಸಿ ವಂದಿಸಿದರು. ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಜನಪ್ರಿಯ ಹಾಗೂ ನಾಡಿನ ಹೆಸರಾಂತ ಆಕಾಶವಾಣಿ ಕಲಾವಿದರಾದ ಡಾ. ಶಿವಶಂಕರ ಬಿರಾದಾರ ಅವರಿಂದ ಶಾಸ್ತ್ರೀಯ ಗಾಯನ, ಆಕಾಶವಾಣಿ ಕಲಾವಿದರಾದ ದತ್ತರಾಜ ಕಲಶೆಟ್ಟಿ ಅವರಿಂದ ಜಾನಪದ ಗೀತೆ ಹಾಗೂ ಸೂರ್ಯಕಾಂತ ಡುಮ್ಮಾ ಅವರು ಸುಗಮ ಸಂಗೀತ ಸುಧೆಯನ್ನು ಹರಿಸಿದರು.
ಸಂಗೀತ ಶಿಕ್ಷಕರಾದ ಶಂಕರ ರುದ್ರವಾಡಿ ಅವರಿಂದ ಮನಮೋಹಕ ಸಿತಾರ್ ವಾದನ ಪ್ರದರ್ಶನ ಕೇಳುಗರ ಮನಸೆಳೆಯಿತು, ಸಂಗೀತ ಶಿಕ್ಷಕರಾದ ಪರಶುರಾಮ ಗರೂರ ಹಾರ್ಮೋನಿಯಂ ಸಾತ್ ನೀಡಿದರು. ಇವರಿಗೆ ಜೊತೆಯಾಗಿ ಆಕಾಶವಾಣಿ ಕಲಾವಿದರಾದ ರವಿಸ್ವಾಮಿ ಗೋಟೂರ ಹಾಗೂ ಅಂಬರೀಶ ಹೂಗಾರ ಅವರು ತಬಲಾ ವಾದನದ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಬಂತು ಜನರು ಬಡಾವಣೆ ಹಿರಿಯರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

