ವಾಡಿ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಅಳವಡಿಸುವಂತೆ ನಮ್ಮ ಕರ್ನಾಟಕ ಸೇನೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕಗಳು ಅಳವಡಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ಮುಖಂಡರು ಸೋಮವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ತಾಲೂಕು ಅಧ್ಯಕ್ಷ ಸುನೀಲ್ ಗುತ್ತೇದಾರ ಮಾತನಾಡಿ, ಎಲ್ಲಾ ಅಂಗಡಿಗಳು, ವಾಣಿಜ್ಯ ಮಳಿಗೆಗಳು ಮತ್ತು ಇತರ ಸಂಸ್ಥೆಗಳ ನಾಮಫಲಕಗಳ ಮೇಲ್ಭಾಗದಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಭಾಷೆಯಲ್ಲಿ ಇರಬೇಕು ಎಂದು ಈಗಾಗಲೇ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದರೂ ಸಹ ವಾಡಿ ಪಟ್ಟಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದರು.
ವಾಡಿ ಪಟ್ಟಣದಲ್ಲಿ ಇರುವ ಸುಮಾರು ಅಂಗಡಿಗಳ ನಾಮ ಫಲಕವು ಕನ್ನಡದಲ್ಲಿ ಇರುವುದಿಲ್ಲ ಶೇ.90 ರಷ್ಟು ಆಂಗ್ಲ (ಇಂಗ್ಲಿಷ್) ಭಾಷೆಯಲ್ಲಿ ಬರೆಸಲಾಗಿರುತ್ತದೆ ಇದ್ದರಿಂದ ಕರ್ನಾಟಕ ರಾಜ್ಯದಲ್ಲಿ ಕನ್ನಡ ಬಳಕೆಯು ಮಾಯವಾಗಿರುತ್ತದೆ. ಇದ್ದರಿಂದ ಭಾಷೆ ಬಳಕೆಯು ಕಡಿಮೆಯಾಗುತ್ತದೆ ಕಾರಣ ಅಂಗಡಿಯ ಮಾಲೀಕರಿಗೆ ಸಲಹೆ ಹಾಗೂ ಸೂಚನೆ ನೀಡಿ ಒಂದು ವಾರದೊಳಗಡೆ ಅಂಗಡಿಯ ಎಲ್ಲಾ ನಾಮ ಫಲಕವು ಕನ್ನಡದಲ್ಲಿ ಹಾಕಿಸುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಲಯ ಅಧ್ಯಕ್ಷ ಸಿದ್ದು ಪೂಜಾರಿ ಮಾತನಾಡಿ, ಸರ್ಕಾರದ ಆದೇಶದಂತೆ ಎಲ್ಲಾ ಅಂಗಡಿಗಳ ಮೇಲೆ ಕನ್ನಡದ ನಾಮಫಲಕಗಳು ಹಾಕಿಸುವ ಕೆಲಸ ತಕ್ಷಣದಿಂದಲೇ ಅಧಿಕಾರಿಗಳು ಮಾಡಬೇಕು, ಇಲ್ಲದಿದ್ದರೆ ಅಂಗಡಿಗಳ ನಾಮಫಲಕಕ್ಕೆ ಮಸಿ ಬಳಿಯುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಪ್ರಧಾನ ಸಂಚಾಲಕರಾದ ಅಂಬರೀಶ್ ಮಾಳಗಿ, ರಾಹುಲ್ ಸಿಂದಗಿ, ಪ್ರಭಾಕರ್ ಪೂಜಾರಿ, ಶಮಶೇರ್ ಪಟೇಲ್, ನಾಗರಾಜ್ ಬನ್ಸೋಡೆ, ಮಹೇಶ್ ದೊಡ್ಡಮನಿ, ಅವಿನಾಶ್ ಗುತ್ತೇದಾರ್ ಸೇರಿದಂತೆ ಇತರರು ಇದ್ದರು.
