ಲಾಡ್ಲಾಪುರ-ಹಲಕರ್ಟಿ ಮಧ್ಯೆ ಕ್ರೂಸರ್ ಲಾರಿ ಡಿಕ್ಕಿ, ಐವರು ಸ್ಥಳದಲ್ಲೇ ಸಾವು | ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಟ್ಯಾಂಕರ್ ಮತ್ತು ಕ್ರೂಸರ್ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿ ಐವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಲಾಡ್ಲಾಪುರ-ಹಲಕರ್ಟಿ ಮಧ್ಯೆ ಶನಿವಾರ ಬೆಳಗಿನ ಜಾವ ಜರುಗಿದೆ.
ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ಘಟನೆ ಜರುಗಿದ್ದು ಸಾರ್ವಜನಿಕರನ್ನು ಬೆಚ್ಚಿಬೀಳುವಂತೆ ಮಾಡಿದೆ. ಯಾದಗಿರಿಯಿಂದ ಇಂಗಳಗಿಗೆ ತೆರಳುತ್ತಿದ್ದ ಕ್ರೂಸರ್ ಮತ್ತು ವಾಡಿಯಿಂದ ಯಾದಗಿರಿಗೆ ತೆರಳುತ್ತಿದ್ದ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ.
ದುರ್ಘಟನೆಯಲ್ಲಿ ಇಂಗಳಗಿಯ ಐದು ಜನ ಮೃತಪಟ್ಟಿದ್ದು ಎಲ್ಲರೂ ಸಂಬಂಧಿಕರು ಆಗಿದ್ದಾರೆ. ಮಹೆಬೂಬ್ ಅಲಿ (42), ತೊಲಾ ಭಾಷಾ (30), ಹುಸೇನ್ ಶಾಹಾಪುರ (47), ರಸೂಲಬೀ (43) ಹಾಗೂ ಫಾತಿಮಾ (40) ಮೃತಪಟ್ಟವರು. ಡಿಕ್ಕಿ ರಭಸಕ್ಕೆ ಕ್ರೂಸರ್ ನಜ್ಜುಗುಜ್ಜಾಗಿದ್ದು ಮತ್ತು ಕ್ರೂಸರ್ನಲ್ಲಿ ಪ್ರಯಾಣಿಸುತ್ತಿದ್ದ ಐವರ ದೇಹಗಳು ಛಿದ್ರಗೊಂಡಿವೆ.
ಲಾಡ್ಲಾಪುರ ಬಳಿ ಭೀಕರ ಅಪಘಾತ, ಐವರ ಸಾವು: ಸಚಿವ ಪ್ರಿಯಾಂಕ್ ಖರ್ಗೆ ದಿಗ್ಭ್ರಮೆ, ಅಗತ್ಯ ನೆರವಿನ ಭರವಸೆ
ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೂಸರ್ ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಕ್ರೂಸರ್ ಗಾಡಿಯಲ್ಲಿದ್ದ ಇಂಗಳಗಿ ಗ್ರಾಮದ ಐವರು ಸ್ಥಳದಲ್ಲೇ ಮೃತರಾಗಿರುವ ವಿದ್ರಾವಕ ಸುದ್ದಿಯು ಮನಸಿನಲ್ಲಿ ತಲ್ಲಣವನ್ನುಂಟುಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು ಅಮೂಲ್ಯ ಜೀವಗಳು ಅಪಘಾತಕ್ಕೆ ಬಲಿಯಾಗಿರುವುದರ ಬಗ್ಗೆ ನೋವು ವ್ಯಕ್ತಪಡಿಸಿ,”ಭಾರವಾದ ಮನಸ್ಸಿನಿಂದಲೇ ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ, ಮೃತರ ಕುಟುಂಬ ವರ್ಗವು ಧೈರ್ಯ ತಂದುಕೊಳ್ಳಬೇಕು ಎಂದಷ್ಟೇ ಈಗ ಹೇಳಬಹುದಾದ ಸಮಾಧಾನದ ಮಾತುಗಳು” ಎಂದು ಪ್ರಿಯಾಂಕ್ ಹೇಳಿದ್ದಾರೆ.
“ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಮಾತನಾಡಿದ್ದೇನೆ, ನಾನು ಮತ್ತು ಜಿಲ್ಲಾಡಳಿತವು ಮೃತರ ಕುಟುಂಬದವರ ಅಗತ್ಯ ನೆರವಿಗೆ ಪೂರ್ಣ ಸಹಕಾರ ನೀಡಲಿದ್ದೇವೆ. ಪ್ರೀತಿಪಾತ್ರರ ಅಗಲಿಕೆ ಭರಿಸುವ ಶಕ್ತಿ ಮೃತರ ಕುಟುಂಬ ವರ್ಗಕ್ಕೆ ಸಿಗುವಂತಾಗಲಿ ಎಂದು ಆಶಿಸುತ್ತೇನೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

