ಜನಸ್ನೇಹಿ ಇಂಜಿನಿಯರ್ ಕೃಷ್ಣ ಅಗ್ನಿಹೋತ್ರಿಗೆ ಬೀಳ್ಕೊಡುಗೆ | ಸರ್ಕಾರಿ ಕೆಲಸದಲ್ಲಿ ಮಾದರಿ ಸೇವೆಯೇ ಇತರರಿಗೆ ಪ್ರೇರಣೆ: ಡಾ.ಉಮೇಶ್ ಜಾಧವ್
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಸರ್ಕಾರಿ ವೃತ್ತಿಯಲ್ಲಿ ಸೂಕ್ಷ್ಮ ಸವಾಲುಗಳನ್ನು ಎದುರಿಸಿ ನಿಯಮದ ಚೌಕಟ್ಟಿನಲ್ಲಿ ಮಾದರಿಯಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದರೆ ಅದು ಇತರ ನೌಕರರಿಗೆ ಪ್ರೇರಣೆಯಾಗಲಿದೆ ಎಂದು ಮಾಜಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಾಧವ್ ಹೇಳಿದರು.
ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಂಪರ್ಕ ಮತ್ತು ಕಟ್ಟಡಗಳ ದಕ್ಷಿಣ ವಲಯದ ಇಂಜಿನಿಯರಿಂಗ್ ವಿಭಾಗದಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಮೂಲತಃ ಚಿಂಚೋಳಿಯ ಕೃಷ್ಣ ಅಗ್ನಿಹೋತ್ರಿ ಇಲಾಖೆಯಲ್ಲಿ 40 ವರ್ಷಗಳ ಸೇವೆಯ ನಂತರ ನವೆಂಬರ್ 30ರಂದು ಸೇವೆಯಿಂದ ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ಇಂಜಿನಿಯರ್ ಸಭಾಂಗಣದಲ್ಲಿ ನವೆಂಬರ್ 28ರಂದು ಶುಕ್ರವಾರ ನಡೆದ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಅಗ್ನಿಹೋತ್ರಿಯವರು ಅಂತಹ ವಿಶೇಷ ವ್ಯಕ್ತಿತ್ವ ಹೊಂದಿದ ಜನಸ್ನೇಹಿ ಇಂಜಿನಿಯರ್ ಆಗಿದ್ದರು. ಬದ್ಧತೆಯೊಂದಿಗೆ ಕಾನೂನಿನಡಿಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ಮಾಡಿ ಮಾದರಿಯಾಗಿ, ಯಾವುದೇ ಪಕ್ಷಪಾತವಿಲ್ಲದೆ ಹಾಗೂ ಕಪ್ಪು ಚುಕ್ಕೆ ಹೊಂದದೆ ನಿವೃತ್ತಿಯಾಗುತ್ತಿರುವ ಸರಳ ವ್ಯಕ್ತಿತ್ವದವರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಚಿಂಚೋಳಿಯಂತಹ ಪ್ರದೇಶಗಳಲ್ಲಿ ಭೂಕಂಪದ ವೇಳೆ ಮನೆ ನಿರ್ಮಾಣ, ನೀರಾವರಿ ಯೋಜನೆಗಳಲ್ಲಿ ಕೆಲಸ ಮಾಡಿ ಜನ ಮೆಚ್ಚುಗೆ ಪಡೆದವರು. ಇಂತಹ ಅಭಿವೃದ್ಧಿ ಚಿಂತಕರು ನಿವೃತ್ತಿಯ ನಂತರ ಕೂಡ ತಮ್ಮನ್ನು ಸಮಾಜ ಸೇವೆಗೆ ಅವರು ತೊಡಗಿಸಿಕೊಳ್ಳಬೇಕು ಎಂದು ಡಾ.ಜಾಧವ್ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಇಂಜಿನಿಯರ್ ಸಿ. ಮಂಜಪ್ಪ, ಜಂಟಿ ಕಾರ್ಯದರ್ಶಿ ನಾಗರಾಜ್, ನಿವೃತ್ತ ಕಾರ್ಯದರ್ಶಿ ಸದಾಶಿವ ರೆಡ್ಡಿ, ನಿವೃತ್ತ ಮುಖ್ಯ ಇಂಜಿನಿಯರ್ ಶ್ರೀನಿವಾಸ್, ಜ್ಯೋತಿ ಕೃಷ್ಣ ಅಗ್ನಿಹೋತ್ರಿ, ಪೂಜಾ ಕುಲಕರ್ಣಿ, ರಾಘವೇಂದ್ರ ಅಗ್ನಿಹೋತ್ರಿ, ರಾಘವೇಂದ್ರ ಕುಲಕರ್ಣಿ, ಹೀರಾಬಾಯಿ ಕುಲಕರ್ಣಿ, ಆಪ್ತ ಕಾರ್ಯದರ್ಶಿ ರಾಮಕೃಷ್ಣ, ವೆಂಕಟೇಶ್ ಹಾಗೂ ಸಿಬ್ಬಂದಿಗಳು ಆತ್ಮೀಯರು ಉಪಸ್ಥಿತರಿದ್ದರು.

