Oplus_0

ನಾಲವಾರ ಶ್ರೀ ಕೋರಿಸಿದ್ಧೇಶ್ವರ ಮಠದಲ್ಲಿ ಕಳೆಗಟ್ಟಿದ ಶ್ರಾವಣ | ವೈಭವದ ಗುರುಪಾದ ಪೂಜೆ | ಆ.21 ರಂದು ಭಕ್ತರಿಗೆ ಗುರುದೀಕ್ಷಾ, ಅಯ್ಯಾಚಾರ ಕಾರ್ಯಕ್ರಮ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಲವಾರದ ಸದ್ಗುರು ಕೋರಿಸಿದ್ಧೇಶ್ವರ ಮಹಾ ಸಂಸ್ಥಾನ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಇಷ್ಟಲಿಂಗ ಸಹಿತ ಗುರುಪಾದ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಭಾವದಿಂದ ನಡೆಯುತ್ತಿದ್ದು, ಶ್ರಾವಣ ಸಂಭ್ರಮ ಕಳೆಗಟ್ಟಿದೆ.

ಪ್ರತಿ ವರ್ಷದ ಪದ್ಧತಿಯಂತೆ ಶ್ರಾವಣದ ಕೊನೆಯ ಗುರುವಾರ ಅಗಸ್ಟ್ 21 ರಂದು, ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ಭಕ್ತರಿಗೆ ಗುರು ದೀಕ್ಷೆ ಹಾಗೂ ಜಂಗಮವಟುಗಳಿಗೆ ಅಯ್ಯಾಚಾರ ದೀಕ್ಷೆ, ಲಿಂಗಧಾರಣೆ ಕಾರ್ಯಕ್ರಮ ನಡೆಯಲಿದೆ ಎಂದು ಮಠದ ವಕ್ತಾರ ಮಹಾದೇವ ಕೆ ಗಂವ್ಹಾರ ತಿಳಿಸಿದ್ದಾರೆ.

ಪವಿತ್ರ ಶ್ರಾವಣ ಮಾಸದ ಅಂಗವಾಗಿ ನಾಲವಾರ ಶ್ರೀಮಠದ ಕೈಲಾಸ ಮಂಟಪದಲ್ಲಿ ಪ್ರತಿನಿತ್ಯ ಪೀಠಾಧಿಪತಿಗಳಾದ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಇಷ್ಟಲಿಂಗ ಸಹಿತ ಮಹಾ ಪಾದಪೂಜೆಯು ಅತ್ಯಂತ ವೈಭವದಿಂದ ನಡೆಯುತ್ತಿದೆ.

ಪ್ರಸಿದ್ಧ ಗಾಯಕರ ಭಕ್ತಿಸಂಗೀತದೊಂದಿಗೆ ಸಿದ್ಧಸಿಂಹಾಸನಾರೂಢರಾಗಿ ಪೂಜೆಯಲ್ಲಿ ಪಾಲ್ಗೊಳ್ಳುವ ಶ್ರೀಗಳ ಇಷ್ಟಲಿಂಗ ಸಹಿತ ಮಹಾ ಪಾದಪೂಜೆ ಭಕ್ತಸಮೂಹವನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪ್ರತಿವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡಾ ಕೋರಿಸಿದ್ಧೇಶ್ವರರ ಕರ್ತೃ ಗದ್ದುಗೆ ಹಾಗೂ ಪೂಜ್ಯರ ದರ್ಶನಕ್ಕಾಗಿ ನಾಡಿನ ವಿವಿಧ ಭಾಗಗಳ ಸಾವಿರಾರು ಭಕ್ತರು ತಂಡೋಪತಂಡವಾಗಿ ಪಾದಯಾತ್ರೆಯ ಮೂಲಕವಾಗಿ ಆಗಮಿಸುತ್ತಿದ್ದಾರೆ.

ಶ್ರೀಮಠದ ದಾಸೋಹಕ್ಕೆ ಸಲ್ಲಿಸಲು ಧಾನ್ಯಗಳನ್ನು ತುಂಬಿದ ಚೀಲಗಳನ್ನು ಭುಜದ ಮೇಲೆ ಹೊತ್ತುಕೊಂಡು, ಮಳೆ-ಗಾಳಿಯ ಮಧ್ಯೆಯೂ ಕುಗ್ಗದೇ ಪಾದಯಾತ್ರೆ ಮೂಲಕ ಆಗಮಿಸುವ ದೃಶ್ಯ ಕಂಡುಬರುತ್ತಿದೆ.

ಗುರುವಾರ ನಡೆಯುವ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಹಾಗೂ ಲಿಂಗಧಾರಣೆ ಮತ್ತು ಗುರುದೀಕ್ಷಾ ಕಾರ್ಯಕ್ರಮದ ಸದುಪಯೋಗವನ್ನು ಸದ್ಭಕ್ತರು ಪಡೆದುಕೊಳ್ಳಬೇಕೆಂದು ಮಹಾದೇವ ಗಂವ್ಹಾರ ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!