ಶ್ರೀ ಕ್ಷೇತ್ರ ನಾಲವಾರ ಶ್ರಾವಣ ಸಂಭ್ರಮ, ಶ್ರೀಗಳ ಇಷ್ಟಲಿಂಗ ಸಹಿತ ಮಹಾಪಾದಪೂಜಾ ಆರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ನಾಲವಾರದ ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಪ್ರಯುಕ್ತ ತಿಂಗಳ ಪರ್ಯಂತ ನಡೆಯುವ ಪೀಠಾಧಿಪತಿಗಳಾದ ಪೂಜ್ಯ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಇಷ್ಟಲಿಂಗ ಸಹಿತ ಮಹಾಪಾದಪೂಜಾ ಸರಸ್ರಾರು ಭಕ್ತರ ಮಧ್ಯೆ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಗುರುವಾರದಂದು ಆರಂಭವಾಯಿತು
ಶ್ರಾವಣ ಮಾಸದ ಅಂಗವಾಗಿ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ಪ್ರತಿನಿತ್ಯ ಪ್ರಾತಃಕಾಲದಲ್ಲಿ ಕರ್ತೃ ಶ್ರೀ ಕೋರಿಸಿದ್ಧೇಶ್ವರರ ಗದ್ದುಗೆಗೆ ಮಹಾ ರುದ್ರಾಭಿಷೇಕ ಪೂಜೆ, ಸಂಜೆ ಕೈಲಾಸ ಮಂಟಪದಲ್ಲಿ ಪೂಜ್ಯರ ಸಂಗೀತ ಸಹಿತ ಇಷ್ಟಲಿಂಗ ಸಹಿತ ಮಹಾಪಾದಪೂಜೆ, ರಾತ್ರಿ ನಾಡಿನ ವಿವಿಧ ಭಜನಾ ಮೇಳಗಳಿಂದ ಅಖಂಡ ಭಜನಾ ಕಾರ್ಯಕ್ರಮ ದಿನನಿತ್ಯ ನಡೆಯಲಿವೆ.
ಶ್ರಾವಣ ಮಾಸದ ವಿಶೇಷ ದಿನಗಳಂದು ಭಕ್ತರಿಗೆ ಇಷ್ಟಲಿಂಗ ಧಾರಣೆ, ರುದ್ರಾಕ್ಷಿ ಧಾರಣೆ, ಗುರುದೀಕ್ಷಾ ಪ್ರದಾನ, ಜಂಗಮವಟುಗಳಿಗೆ ಉಚಿತ ಅಯ್ಯಾಚಾರ ದೀಕ್ಷಾ ಕಾರ್ಯಕ್ರಮ ಸೇರಿದಂತೆ ವಿವಿಧ ಧಾರ್ಮಿಕ ಚಟುವಟಿಕೆಗಳು ನಡೆಯಲಿವೆ.
ನಾಡಿನ ಹಲವು ಭಾಗಗಳಿಂದ ಭಕ್ತರು ತಂಡೋಪತಂಡಗಳಾಗಿ ಪಾದಯಾತ್ರೆಯ ಮೂಲಕ ಆಗಮಿಸಿ ಶ್ರೀಮಠದ ಪೂಜ್ಯರ ದರ್ಶನ ಪಡೆಯಲಿದ್ದಾರೆ. ವಿವಿಧ ಧರ್ಮಗುರುಗಳು ಹಾಗೂ ವಿದ್ವಾಂಸರಿಂದ ಪ್ರವಚನ-ಉಪನ್ಯಾಸಗಳು, ಪುಸ್ತಕ ಬಿಡುಗಡೆ ಸೇರಿದಂತೆ ಬೌದ್ಧಿಕ ಕಾರ್ಯಕ್ರಮಗಳೂ ಕೂಡಾ ನಡೆಯಲಿವೆ.
ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಇಷ್ಟಲಿಂಗ ಸಹಿತ ಮಹಾಪಾದಪೂಜೆಯು ಶ್ರಾವಣ ಮಾಸದ ವಿಶೇಷವಾಗಿದ್ದು, ಪುಷ್ಪಾಲಂಕೃತ ಮಹಾಮಂಟಪದಲ್ಲಿ, ಖ್ಯಾತ ಗಾಯಕರ ಗಾನ-ಸಂಗೀತದ ಮಧ್ಯೆ ನಡೆಯುವ ಪಾದಪೂಜೆಯು ಸಹಸ್ರಾರು ಭಕ್ತರನ್ನು ಭಕ್ತಿಪರವಶರಾಗುವಂತೆ ಮಾಡುತ್ತದೆ.
ಪ್ರತಿನಿತ್ಯವು ಆಗಮಿಸುವ ಸಹಸ್ರಾರು ಭಕ್ತರಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದ್ದು, ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಭಕ್ತರು ಜಾತಿ-ಮತ ಗಳ ಗೊಡವೆಯಿಲ್ಲದೇ ತನು-ಮನ-ಧನದಿಂದ ಭಕ್ತಿ ಸಮರ್ಪಿಸುತ್ತಾರೆ.
ನಾಲವಾರ ಮಠದಲ್ಲಿ ನಡೆಯುವ ವಿಶೇಷ ಶ್ರಾವಣೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುವಿನ ಕೃಪೆಗೆ ಪಾತ್ರರಾಗಬೇಕೆಂದು ಮಠದ ವಕ್ತಾರ ಮಹಾದೇವ ಗಂವ್ಹಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

