ಭಕ್ತರಿಂದ ರಜತ ಪಾದುಕೆ ಅರ್ಪಣೆ, ತುಲಾಭಾರ ಸೇವೆ | ಭಕ್ತಿ ಭಾವದಿಂದ ನಡೆದ ನಾಲವಾರ ಶ್ರೀಗಳ ಜನ್ಮದಿನೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮದಿನೋತ್ಸವ ಹಾಗೂ ಹಿಂದಿನ ಪೀಠಾಧಿಪತಿಗಳಾದ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಾರಾಧನಾ ಮಹೋತ್ಸವವು ಆಯುಧಪೂಜೆಯ ದಿನದಂದು ಸಹಸ್ರಾರು ಭಕ್ತರ ಮಧ್ಯೆ ಭಕ್ತಿಭಾವದೊಂದಿಗೆ ನೆರವೇರಿತು.
ಭೀಮಾ ನದಿಯ ಪ್ರವಾಹ, ಅತಿವೃಷ್ಠಿಯ ಕಾರಣದಿಂದ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿರುವುದರಿಂದ, ಜನ್ಮದಿನದ ಅದ್ಧೂರಿ ಆಚರಣೆಗೆ ಪೂಜ್ಯರೂ ತಡೆ ಒಡ್ಡಿದ್ದರೂ ಸಹ, ಬುಧವಾರ ಪ್ರಾತಃ ಕಾಲದಿಂದಲೇ ತಂಡೋಪತಂಡಗಳಾಗಿ ಸಹಸ್ರಾರು ಭಕ್ತರು ಶ್ರೀಮಠಕ್ಕೆ ಆಗಮಿಸಿ, ಪೂಜ್ಯರಿಗೆ ಗುರುವಂದನೆ ಸಲ್ಲಿಸಿದರು.
ಮಠದ ಈ ಹಿಂದಿನ ಪೀಠಾಧಿಪತಿಗಳಾಗಿದ್ದ, ಲೀಲಾಮೂರ್ತಿ, ಪವಾಡಪುರುಷ, ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ಪ್ರಯುಕ್ತ ರಾತ್ರಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಪೂಜ್ಯರಿಂದ ಮಹಾಮಂಗಳಾರತಿ ನೆರವೇರಿತು.
ಶ್ರೀ ಸಿದ್ಧತೋಟೇಂದ್ರ ಸುವರ್ಣ ಭವನದಲ್ಲಿ ನಡೆದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಸರಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಮಠದ ಸದ್ಭಕ್ತರಾದ ಸಂಗಣ್ಣ ಸಾಹು ತಿಪ್ಪ ಮತ್ತಿನ್ಮಡು ಅವರಿಂದ ನಾಣ್ಯಗಳಿಂದ ಪೂಜ್ಯರ ತುಲಾಭಾರ ಸೇವೆ ನೆರವೇರಿಸಿ ಭಕ್ತಿ ಸಮರ್ಪಣೆ ಮಾಡಿದರು ಶ್ರೀ ಮಠದ ಇನ್ನೋವ ಭಕ್ತಾರಾದ ಶ್ರೀ ಶಿವಲಿಂಗ ಭೀಮನಹಳ್ಳಿ ಬೆಂಗಳೂರು ಅವರಿಂದ ರಜತ ಪಾದುಕೆಗಳನ್ನು ಸಮರ್ಪಿಸಿ ಕೃತಾರ್ಥರಾದರು.
ಪೂಜ್ಯರ 61 ನೆಯ ಜನ್ಮದಿನೋತ್ಸವ ಪ್ರಯುಕ್ತ ಯುವ ಭಕ್ತರು ತಂದಿದ್ದ 61 ಕೆಜಿ ತೂಕದ ಅನೇಕ ಬೃಹತ್ ಕೇಕ್ ಗಳನ್ನು ಕತ್ತರಿಸುವ ಮೂಲಕ ಜನ್ಮದಿನ ಆಚರಿಸಲಾಯಿತು.
9 ದಿನಗಳ ಪರ್ಯಂತ ಪುಣ್ಯಾರಾಧನಾ ಹಾಗೂ ಜನ್ಮದಿನೋತ್ಸವ ನಿಮಿತ್ತ ನಡೆದ ಸಂಗೀತ ನಾದಾರ್ಚನೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಗೀತ ಸೇವೆ ಸಲ್ಲಿಸಿದ ವಿವಿಧ ಕಲಾವಿದರು ಮತ್ತು ವೈದಿಕ ಸೇವೆ ಸಲ್ಲಿಸಿದ ಶಿವಯ್ಯ ಶಾಸ್ತ್ರಿ ಶಹಾಪುರ್ ಅನೇಕ ಭಕ್ತರಿಗೆ ಪೂಜ್ಯರು ಗುರುರಕ್ಷೆ ನೀಡಿ ಆಶೀರ್ವದಿಸಿದರು.
ಜನ್ಮದಿನ ಸಮಾರಂಭದಲ್ಲಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಚಿತ್ತಾಪುರ ತಹಸೀಲ್ದಾರ್ ನಾಗಯ್ಯ ಹಿರೇಮಠ, ಸಾಹಿತಿ ಸಿದ್ಧರಾಮ ಹೊನಕಲ್, ಮಹೇಶ್ ವೀರಯ್ಯಸ್ವಾಮಿ ಚಿಂಚೋಳಿ, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಆನಂದ ಮದರಿ , ಶಿವಯೋಗಪ್ಪ ಸಾಹು ಸನ್ನತಿ, ಸಿದ್ದು ಅಂಗಡಿ ಜೇವರ್ಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕುಮಾರಿ ಪ್ರತೀಕಾ ಗಾರಂಪಳ್ಳಿ ಚಿತ್ತಾಪುರ ಮತ್ತು ಈಶಾ ಪಡಶೆಟ್ಟಿ ಯಾದಗಿರಿ ಇವರಿಂದ ಭರತನಾಟ್ಯ ನೆರವೇರಿತು.
ಆಗಮಿಸಿದ್ದ ಭಕ್ತರಿಗಾಗಿ ಶ್ರೀಮಠದಲ್ಲಿ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕೇವಲ ನಾಲವಾರ ಮಾತ್ರವಲ್ಲದೆ, ದೆಹಲಿ, ಬೆಂಗಳೂರು, ಹೈದರಾಬಾದ್, ಕಲಬುರಗಿ, ಯಾದಗಿರ. ರಾಯಚೂರು, ಜೇವರ್ಗಿ, ಚಿತ್ತಾಪುರ, ಶಹಾಪುರ ಸೇರಿದಂತೆ ನಾಡಿನ ವಿವಿಧ ಭಾಗಗಳಲ್ಲಿ ಪೂಜ್ಯರ ಜನ್ಮದಿನದ ಅಂಗವಾಗಿ, ಭಕ್ತರು ಅನ್ನದಾನ, ರಕ್ತದಾನ, ರೋಗಿಗಳಿಗೆ ಹಣ್ಣು ಹಂಪಲು ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ, ಉಚಿತ ಆರೋಗ್ಯ ತಪಾಸಣಾ ಮತ್ತು ನೇತ್ರ ತಪಾಸಣೆ ಶಸ್ತ್ರ ಚಿಕಿತ್ಸೆ ಶಿಬಿರಗಳನ್ನು ಆಯೋಜಿಸಿ ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದು ವಿಶೇಷವಾಗಿತ್ತು.
ಜಿಲ್ಲಾ ಹಡಪದ ಸಮಾಜವು ಪೂಜ್ಯರ ಜನ್ಮದಿನದ ಪ್ರಯುಕ್ತ ಕಲಬುರಗಿ ನಗರದಲ್ಲಿ ನಿರ್ಗತಿಕರು, ಅನಾಥ ಮಕ್ಕಳಿಗೆ ಉಚಿತ ಕ್ಷೌರ ಮಾಡಿ ಭಕ್ತಿ ಸಮರ್ಪಣೆ ಮಾಡಿ ಮಾದರಿಯಾದರು. ಕಾರ್ಯದರ್ಶಿ ವಿರೂಪಾಕ್ಷಯ್ಯ ಸ್ವಾಮಿ ನಿರೂಪಿಸಿದರು. ಮಹಾದೇವ ಗಂವ್ಹಾರ ವಂದಿಸಿದರು.

