ರಾಜ್ ಸ್ಮಾರಕ ಭೂಮಿ ಬಗ್ಗೆ ನಟ ಚೇತನ್ ವಿವಾದಾತ್ಮಕ ಹೇಳಿಕೆ ವಿರುದ್ಧ ಪ್ರಣವಾನಂದ ಶ್ರೀ, ರಾಜಕುಮಾರ ಅಭಿಮಾನಿ ಬಳಗ ತೀವ್ರ ಆಕ್ರೋಶ, ದೂರು
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ವರನಟ ಡಾ. ರಾಜಕುಮಾರ್ ಅವರ ಸ್ಮಾರಕಕ್ಕೆ ಸರ್ಕಾರ ನೀಡಿರುವ ಎರಡುವರೆ ಎಕರೆ ಭೂಮಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಟ ಚೇತನ್ ವಿರುದ್ಧ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಶ್ರೀ ಡಾ. ಪ್ರಣವಾನಂದ ಶ್ರೀಗಳು ಮತ್ತು ಕಲಬುರಗಿ ರಾಜಕುಮಾರ್ ಅಭಿಮಾನಿಗಳ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿ ಕೇಸು ದಾಖಲಿಸುವಂತೆ ಒತ್ತಾಯಿಸಿದೆ.
ಕಲಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರಿಗೆ ಕಲಬುರಗಿ ಜಿಲ್ಲಾ ಚಿತ್ತಾಪುರ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಶ್ರೀಗಳು ಮತ್ತು ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ನೇತೃತ್ವದ ನಿಯೋಗ ತೆರಳಿ ರಾಜಕುಮಾರ ಅವರ ಹುಟ್ಟು ಹಬ್ಬದ ದಿನ ನಟ ಚೇತನ್ ತಮ್ಮ ಎಕ್ಸ್ ಖಾತೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡ ನಾಡಿನ ರಾಜ್ಯ ಅಭಿಮಾನಿಗಳ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಅದಕ್ಕಾಗಿ ಶೀಘ್ರದಲ್ಲೇ ಅವರು ರಾಜಕುಮಾರ್ ಸಮಾಧಿ ಮುಂದೆ ನಿಂತು ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಕೇಸು ದಾಖಲಿಸಿ ರಾಜ್ಯದಿಂದ ಗಡಿಪಾರು ಮಾಡಬೇಕು. ಚೇತನ ಅವರು ಕ್ಷಮೆ ಕೇಳದಿದ್ದರೆ ರಾಜ್ಯಾದ್ಯಂತ ರಾಜ್ ಅಭಿಮಾನಿಗಳು ಬೀದಿಗಿಳಿದು ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಡಾ ರಾಜಕುಮಾರ್ ಅವರು ಕನ್ನಡ ರತ್ನ ಮತ್ತು ದೇಶದ ಆಸ್ತಿ ಅಂತಹವರ ವಿರುದ್ಧ ಚೇತನ್ ಪುಕ್ಕಟ್ಟೆ ಪ್ರಚಾರಕ್ಕಾಗಿ ಹೇಳಿಕೆ ನೀಡಿ ಕನ್ನಡಿಗರ ಮನ ನೋಯಿಸಿದ್ದಾರೆ, ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಈಡಿಗ ಸಮುದಾಯ ಸೇರಿದಂತೆ ಸಮಸ್ತ ಕನ್ನಡಿಗರು ಹೋರಾಟ ಮಾಡೋದು ಖಚಿತ ಎಂದು ಡಾ. ಪ್ರಣವಾನಂದ ಶ್ರೀಗಳು ಹೇಳಿದರು.
ಡಾ ರಾಜ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಚೇತನ್ ವಿರುದ್ಧ ಕಲಬುರಗಿಯ ಸಮಸ್ತ ರಾಜ್ಯ ಅಭಿಮಾನಿಗಳು ಬೆಂಗಳೂರಿಗೆ ಧಾವಿಸಿ ಹೋರಾಟ ನಡೆಸಲು ಬೀದಿಗೆ ಇಳಿಯುವುದಾಗಿ ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ತಿಳಿಸಿದ್ದಾರೆ.
ಎಸ್ ಪಿ ಅವರಿಗೆ ದೂರು ಸಲ್ಲಿಸಲು ತೆರಳಿದ ನಿಯೋಗದಲ್ಲಿ ಡಾ. ರಾಜ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷರು ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಮಾಧ್ಯಮ ಸಂಚಾಲಕ ಡಾ. ಸದಾನಂದ ಪೆರ್ಲ, ಉದ್ಯಮಿ ಹಾಗೂ ಬಿಲ್ಲವ ಸಂಘದ ಕಲಬುರಗಿ ಜಿಲ್ಲಾ ಘಟಕದ ಮುಖಂಡ ಪ್ರವೀಣ್ ಜತ್ತನ್, ಈಡಿಗ ಸಮಾಜದ ಮುಂದಾಳು ಶಿವರಾಜ್ ಗುತ್ತೇದಾರ್ ಜೇವರ್ಗಿ, ಜುಬೇರ್ ಅನ್ಸಾರಿ ಕಿಶೋರ್ ಘಂಟಿ, ಚಂದಯ್ಯ ಮುಂತಾದವರು ಜೊತೆಗಿದ್ದರು.
ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಮನವಿಯನ್ನು ಸ್ವೀಕರಿಸಿ, ಕಾನೂನು ತಜ್ಞರ ಜೊತೆ ಕೂಡಲೇ ಚರ್ಚಿಸಿ ಮೊಕದ್ದಮೆ ದಾಖಲಿಸುವ ಕುರಿತು ನಿರ್ಧರಿಸುವುದಾಗಿ ಭರವಸೆ ನೀಡಿದರು.

